ಸಂವಿಧಾನ ಬದಲಾವಣೆ: ಅಪ್ರಭುತ್ವದ ಹೇಳಿಕೆ: ವೈ ಹೆಚ್ ಹುಚ್ಚಯ್ಯ

ತುಮಕೂರು

         ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಅಪಪ್ರಚಾರ ಮಾಡುತ್ತಾ ದಲಿತರ ಭಾವನೆ ಕೆಡಿಸಿ, ಅಡ್ಡದಾರಿಗೆಳೆಯುತ್ತಿರುವ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅಪ್ರಭುತ್ವ ಹೇಳಿಕೆ ನಿಲ್ಲಿಸಲಿ, ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿಲ್ಲವೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ವೈ ಹೆಚ್ ಹುಚ್ಚಯ್ಯ ಟೀಕಿಸಿದರು.

        ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಮಾಡಲು ಯಾರಿಗೂ ಹಕ್ಕಿಲ್ಲ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಆರ್ಟಿಕಲ್ 368ರಲ್ಲಿ ದೇಶದ ಜನರ ಒಳಿತಿಗಾಗಿ, ಅಭಿವೃದ್ಧಿಗಾಗಿ ಆಯಾ ಸಂದರ್ಭಕ್ಕೆ ತಕ್ಕಂತೆ ಸಂವಿಧಾನದ ತಿದ್ದಪಡಿ ಬಗ್ಗೆ ಉಲ್ಲೇಖಿಸಿದ್ದಾರೆ ಎಂದರು.

        ಈವರೆಗೆ 103 ಬಾರಿ ಸಂವಿಧಾನದ ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್ ಆಡಳಿತ ಕಾಲದಲ್ಲೇ ಹೆಚ್ಚು ತಿದ್ದುಪಡಿ ಮಾಡಲಾಗಿದೆ. ಇದು ಡಾ. ಪರಮೇಶ್ವರ್‍ರಿಗೆ ತಿಳಿದಿಲ್ಲವೆ, ತಿಳಿದಿದ್ದೂ ದಲಿತ ಮತದಾರರ ಮನಸನ್ನು ಬೇರೆಡೆಗೆ ಸೆಳೆಯಲು ಕೀಳು ದರ್ಜೆಗಿಳಿದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

        ದೆಹಲಿಯಲ್ಲಿ ಅಂಬೇಡ್ಕರ್ ನಿಧನರಾದಾಗ ಅಂತ್ಯಕ್ರಿಯೆ ಮಾಡಲು ಜಾಗ ನೀಡದೆ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಬಗೆದಿರುವ ದ್ರೋಹದ ಬಗ್ಗೆ ಡಾ. ಪರಮೇಶ್ವರ್ ಪ್ರಶ್ನಿಸುವ ಧೈರ್ಯ ತೋರುತ್ತಾರೆಯೆ ಎಂದು ಕೇಳಿದ ವೈ ಹೆಚ್ ಹುಚ್ಚಯ್ಯ, ಬಿಜೆಪಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಪಕ್ಷ ಎಂದೂ ಹಾಗೆ ಹೇಳಿಲ್ಲ ಎಂದರು.

        ಅಂಬೇಡ್ಕರ್ ವಾಸವಿದ್ದ ಐದು ಕ್ಷೇತ್ರಗಳನ್ನು ಪಂಚ ತೀರ್ಥ ಕ್ಷೇತ್ರಗಳೆಂದು ಮೋದಿ ಸಕಾರ ಅಭಿವೃದ್ಧಿಪಡಿಸುತ್ತಿದೆ. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಕಾಂಗ್ರೆಸ್ ಮುಂದಾಗಲಿಲ್ಲ, ಬಿಜೆಪಿ ಬೆಂಬಲಿತ ವಿ ಪಿ ಸಿಂಗ್ ಸರ್ಕಾರ ಇದ್ದಾಗ ಭಾರತರತ್ನ ನೀಡಲಾಯಿತು. ಅಂಬೇಡ್ಕರ್ ಹೇಳಿದಂತೆ ಐದು ವರ್ಷಕ್ಕೊಮ್ಮೆ ನೋಟು ಬದಲಾವಣೆ ಮಾಡಬೇಕಾಗಿತ್ತು, ಅದನ್ನು ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ, ಬಿಜೆಪಿ ನೋಟು ರದ್ದು ಮಾಡಿ ಅಂಬೇಡ್ಕರ್ ವಿಚಾರಧಾರೆಗಳಿಗೆ ಬೆಂಬಲ ನೀಡಿದೆ.

      ದಲಿತರಿಗೆ ಸಾಂದರ್ಭಿಕ ಸೇವಾ ಜೇಷ್ಠತೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಂವಿಧಾನಕ್ಕೆ ತಿದ್ದುಪಡಿ ತಂದು ದಲಿತರಿಗೆ ಸಾಂವಿಧಾನಿಕ ರಕ್ಷಣೆ ನೀಡಿದ್ದು ವಾಜಪೇಯಿ ಅವರೇ. ಆದರೆ ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‍ಗೆ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಹುಚ್ಚಯ್ಯ ಟೀಕಿಸಿದರು.

      ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಹೆಸರಿನಲ್ಲಿ ಭೀಮ್ ಆಪ್ ಅಭಿವೃದ್ಧಿಗೊಳಿಸಿದರು. ಪರಿಶಿಷ್ಟ ಜಾತಿ, ವರ್ಗದ ಹಬ್ ತೆರೆದು ವೃತ್ತಿಪರ ಪದವೀಧರರಿಗೆ ಸರ್ಕಾರದಿಂದ ತರಬೇತಿ ನೀಡಿ, ಶೂರಿಟಿ ಇಲ್ಲದೇ ಸಾಲ ಕೊಟ್ಟು ಕೈಗಾರಿಕಾ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ಬಿಜೆಪಿ ಸರ್ಕಾರ ಎಂದು ಹೇಳಿದರು.

          ಡಾ. ಪರಮೇಶ್ವರ್ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ, ಜನರ ಕೈಗೆ ಸಿಗದ ವೈಟ್ ಕಾಲರ್ ರಾಜಕಾರಣಿ ಪರಮೇಶ್ವರ್ ಅವರು ಮುದ್ದಹನುಮೇಗೌಡರನ್ನು ಬಳಸಿಕೊಂಡು ಕೋಟ್ಯಾಂತರ ರೂ ಹಂಚಿ, ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೋಂಡು ಕೊರಟಗೆರೆಯಲ್ಲಿ ಗೆದ್ದಿದ್ದಾರೆ. ನೀರು ಇಲ್ಲದೆ ಜನ ಪರಿತಪಿಸುತ್ತಿರುವ ಪರಿಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಹೇಮಾವತಿ ನೀರು ಬಿಡಿಸುವ ಪ್ರಯತ್ನ ಮಾಡಲಿಲ್ಲ, ದಲಿತ ಸಮುದಾಯದಲ್ಲಿ ಹುಟ್ಟಿದ್ದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಪರಮೇಶ್ವರ್ ಅವರಿಂದ ಯಾರೂ ಬುದ್ದಿ ಕಲಿಯಬೇಕಾಗಿಲ್ಲ ಎಂದು ವೈ ಹೆಚ್ ಹುಚ್ಚಯ್ಯ ಹೇಳಿದರು.ಮಾಜ ಶಾಸಕ ಗಂಗಹನುಮಯ್ಯ, ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಸಂಚಾಲಕ ರಾಮಚಂದ್ರಪ್ಪ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link