ತುರುವೇಕೆರೆ:
ತಾಲೂಕಿನಲ್ಲಿ ಯೂರಿಯ ಗೊಬ್ಬರದ ಅಭಾವ ಹಿನ್ನಲೆ ಪಟ್ಟಣದ ಗೊಬ್ಬರ ಅಂಗಡಿಯಲ್ಲಿ ತಾಲೂಕಿನ ರೈತರು ಆಗಮಿಸಿ ಯೂರಿಯ ಗೊಬ್ಬರವನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡು ಬಂತು.
ತಾಲೂಕಿನಾದ್ಯಂತ ಸುಮಾರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ರಾಗಿ, ತೊಗರಿ, ಅವರೇ, ಅರಳು ಸೇರಿದಂತೆ ಇತರೆ ಬೆಳೆಗಳಿಗೆ ಯೂರಿಯ ಗೊಬ್ಬರದ ಅಗತ್ಯವಿದ್ದು ರೈತರು ತಮ್ಮ ಬೆಳೆಗಳಿಗೆ ಯೂರಿಯ ಸಿಗುವುದಿಲ್ಲ ಎಂಬ ಆತಂಕದಲ್ಲಿ ಬುಧವಾರ ಬೆಳಿಗ್ಗೇನೆ ಪಟ್ಟಣಕ್ಕೆ ಆಗಮಿಸಿದ ರೈತರು ಗೊಬ್ಬರ ಅಂಗಡಿ ಮುಂಭಾಗ ಯೂರಿಯ ಕೊಳ್ಳಲು ಮುಗಿಬಿದ್ದರು. ರೈತರು ತಮ್ಮ ಬೈಕ್ನಲ್ಲಿ ಎರಡು ಮೂರು ಯೂರಿಯ ಮೂಟೆಗಳನ್ನು ತೆಗೆದು ಕೊಂಡು ತೆರಳುತ್ತಿದ್ದುದು ಕಾಣಬಂತು.
ಗೊಬ್ಬರ ಅಂಗಡಿ ಮಾಲೀಕರು ಅಂಗಡಿ ಮುಂದೆ ಜಮಾವಣೆಯಾದ ರೈತರಿಗೆ ಹಣ ಪಡೆದು ಚೀಟಿ ನೀಡಿ ಗೋಡೋನ್ ಗಳಲ್ಲಿ ತೆಗೆದುಕೊಳ್ಳುವಂತೆ ಹೇಳಿ ಕಳಿಸುತ್ತಿದ್ದು ಕೆಲವು ಅಂಗಡಿಗಳಲ್ಲಿ ಮೂಟೆಗೆ 300 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲ ರೈತರು ಆರೋಪಿಸಿದ್ದಾರೆ.
ಎಲ್ಲಿ ಎಷ್ಟು ಗೊಬ್ಬರ ಲಬ್ಯ: ತಾಲೂಕಿನ ದಂಡಿನಶಿವರ, ಸಂಪಿಗೆ ಸಹಕಾರ ಸಂಘ ತಲಾ 25. ಮೆಟ್ರಿಕ್ ಟನ್, ಪಟ್ಟಣದ ಟಿಎಪಿಎಂಎಸ್ 54 ಮೆಟ್ರಿಕ್ ಟನ್, ಅಯ್ಯಪ್ಪ ಸ್ವಾಮಿ ಪರ್ಟಿಲೈಸರ್ 49.9 ಎಂ.ಟಿ, ಜವರೇಗೌಡ ಪರ್ಟಿಲೈಸರ್ 20ಎಂ.ಟಿ, ಮಾಯಸಂದ್ರ ಸಹಕಾರ ಸಂಘ 19.80 ಮೆಟ್ರಿಕ್ ಟನ್ ಸೇರಿ ತಾಲೂಕಿನಲ್ಲಿ ಒಟ್ಟು 169 ಮೆಟ್ರಿಕ್ ಟನ್ ಲಬ್ಯವಿದೆ.
ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ಕುಮಾರ್ ಮಾತನಾಡಿ ತಾಲೂಕಿನಲ್ಲಿ ಯೂರಿಯ ದಾಸ್ತಾನಿದ್ದು ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯೂರಿಯ ಸಿಗವುದಿಲ್ಲ ಎಂದು ರೈತರು ಹೆಚ್ಚು ಬೆಲೆ ಕೊಟ್ಟು ಕೊಳ್ಳದೆ ಒಂದು ಮೂಟೆಗೆ 270 ರೂ.ಗಳನ್ನು ಮಾತ್ರ ನೀಡಬೇಕು. ಒಂದು ವೇಳೆ ಅಂಗಡಿಯವರು ನಿಗದಿತ ಬೆಲೆಗಿಂತ ಹೆಚ್ಚ ಕೇಳಿದಲ್ಲಿ ಹೆಚ್ಚು ಹಣ ಪಡೆಯುವವರ ಅಂಗಡಿಯವರ ಬಗ್ಗೆ ಇಲಾಖೆಗೆ ದೂರು ನೀಡಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
