ಚಿತ್ರದುರ್ಗ :
ಮಿತ ಆಹಾರ ಮತ್ತು ದೈಹಿಕ ವ್ಯಾಯಾಮ ಮನುಷ್ಯನ ಆರೋಗ್ಯ ಮತ್ತು ದೈಹಿಕ ರಚನೆಯನ್ನು ಅತ್ಯಂತ ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ವಿದ್ಯಾನಗರದಲ್ಲಿರುವ ಚಿತ್ರದುರ್ಗ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಆರ್.ಜಿ.ಯು.ಹೆಚ್.ಎಸ್. ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹಾಗು ಸಿಬ್ಬಂದಿಯವರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು
ಹೆಚ್ಚು ಕಮ್ಮಿ ಪ್ರತಿಯೊಬ್ಬರು ತಾವು ದೈಹಿಕವಾಗಿ ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಉತ್ತಮವಾದ ಮಿತ ಆಹಾರ ಸೇವೆನೆ ಮತ್ತು ವ್ಯಾಯಾಮವನ್ನು ನಾವು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಇನ್ನು ಕೆಲವರು ಅಪರಿಮಿತವಾಗಿ ಆಹಾರ ಸೇವಿಸುತ್ತಾ ದೈಹಿಕ ಚಟುವಟಿಕೆಗಳನ್ನು ನಡೆಸದೆ ಸ್ಥೂಲಕಾಯರಾಗಿ ದೈಹಿಕ ಅನಾರೋಗ್ಯ ತಂದುಕೊಳ್ಳುತ್ತಾರೆ ಎಂದರು.
ಮಾತು ರಹಿತವಾದ ನಡಿಗೆ ನಮ್ಮ ದೈನಂದಿನ ವ್ಯಾಯಾಮವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ ಎಂದು ತಮ್ಮ ಆರೋಗ್ಯದ ಗುಟ್ಟು ಬಿಚ್ಚಿಟ್ಟರು. ಕಡಿಮೆ ಮಾತು ತೆಳು ಕಾಯ ಬದುಕನ್ನು ಬಹಳಷ್ಟು ದಿನ ಸಾಗಿಸುತ್ತವೆ ಎಂಬುದಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಈ ಹಿಂದಿನ ಸ್ವಾಮೀಜಿಗಳೇ ಸಾಕ್ಷಿ ಎಂದು ಅವರು ಹೇಳಿದರು. ಇವುಗಳ ಜೊತೆಗೆ ಕ್ರೀಡಾ ಚಟುವಟಿಕೆಗಳು ನಮ್ಮನ್ನು ಇನ್ನೂ ಸದೃಢ ಕಾಯರನ್ನಾಗಿ ಮಾಡಿ ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಅವರು ಹೇಳಿದರು.
42 ಪುರುಷ ತಂಡಗಳು, 34 ಮಹಿಳಾ ತಂಡಗಳು ಹಾಗೂ 27 ಸಿಬ್ಬಂದಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದವು. ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೌರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಈ.ಚಿತ್ರಶೇಖರ್, ಉಪಪ್ರಾಚಾರ್ಯರಾದ ಡಾ. ರಘುನಾಥರೆಡ್ಡಿ, ಕ್ರೀಡಾ ಸಂಘಟನಾ ಕಾರ್ಯದರ್ಶಿ ಸಿ.ಅಭಯಪ್ರಕಾಶ್ ಹಾಗೂ ನಾನಾ ಕಾಲೇಜುಗಳ ಬೋಧಕ ಸಿಬ್ಬಂದಿಯವರು ವೇದಿಕೆಯಲ್ಲಿದ್ದರು.ಕು| ಪ್ರಿಯಾಂಕ ಪ್ರಾರ್ಥಿಸಿದರು. ಪಲ್ಲವಿ ಸರ್ಕಾರ್ ಸ್ವಾಗತಿಸಿದರು. ಸಜಿತ್ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು. ಶುಭಂ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
