ಹುಳಿಯಾರು
ತುಮಕೂರು ಲೋಕಸಭಾ ಕ್ಷೇತ್ರದಲ್ಲಿನ ಈ ಬಾರಿಯ ಚುನಾವಣಾ ಪ್ರಚಾರವು ಯಾವುದೇ ಅಬ್ಬರ ಇಲ್ಲದೆಯೇ ಮುಗಿಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆಯಿತ್ತಾದರೂ ಪ್ರಾಚರದಲ್ಲಿ ಖದ್ದರು ಇಲ್ಲವಾಗಿತ್ತು.
ಚಿ.ನಾ.ಹಳ್ಳಿಯಲ್ಲಿ ಜೆಡಿಎಸ್ನ 2 ಹಾಗೂ ಬಿಜೆಪಿಯ 1 ಸಮಾವೇಶ ನಡೆದಿದ್ದು ಬಿಟ್ಟರೆ ತಾಲೂಕಿನ ಯಾವುದೇ ಹೋಬಳಿಯಲ್ಲಿ ಅದ್ದರೂರಿ ಸಮಾವೇಶ ನಡೆಯಲೇ ಇಲ್ಲ. ತಾಲೂಕಿನಲ್ಲೇ ಅತೀ ದೊಡ್ಡ ಹೋಬಳಿ ಮತ್ತು ಅತೀ ಹೆಚ್ಚು ಮತದಾರರಿರುವ ಹುಳಿಯಾರಿನಲ್ಲಿ ಯಾವುದೇ ದೊಡ್ಡ ಮಟ್ಟದ ಚುನಾವಣಾ ಸಮಾವೇಶಗಳು ನಡೆಯದಿದ್ದು ಅಚ್ಚರಿ ಮೂಡಿಸಿತ್ತು.
ಕ್ಷೇತ್ರದಲ್ಲಿ ಜೆಡಿಎಸ್ನಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಟಾರ್ ಪ್ರಚಾರಕರಾಗಿ ಆಗಮಿಸಿದ್ದು ಬಿಟ್ಟರೆ ಬಿಜೆಪಿಯಿಂದ ಯಾವ ಸ್ಟಾರ್ ಪ್ರಚಾರಕರೂ ಆಗಮಿಸಿರಲಿಲ್ಲ. ಹಳ್ಳಿಹಳ್ಳಿಯಲ್ಲಿ ಸಭೆ ನಡೆಸಿ ತಮ್ಮ ವಾಕ್ ಚಾತುರ್ಯದಿಂದ ಶಾಸಕ ಜೆ.ಸಿ.ಮಾಧುಸ್ವಾಮಿ ಅವರೇ ಬಿಜೆಪಿ ಪಾಲಿಕೆ ಲೋಕ ಸಮರದ ಸ್ಟಾರ್ ಆಗಿದ್ದರು. ಅಲ್ಲದೆ ಪ್ರಚಾರ ಸಭೆಯಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ರಾಜ್ಯ ರಾಜಕಾರಣದ ಗಮನ ಸೆಳೆದಿದ್ದರು.
ಅಭ್ಯರ್ಥಿಗಳೇ ಬರಲಿಲ್ಲ: ಈ ಚುನಾವಣೆಯ ಅಚ್ಚರಿಯ ಸಂಗತಿಯೇನೆಂದರೆ ಹಳ್ಳಿಹಳ್ಳಿಗಿರಲಿ ಹೋಬಳಿ ಕೇಂದ್ರಗಳಿಗೇ ಅಭ್ಯರ್ಥಿಗಳು ಬಂದು ಮತಯಾಚನೆ ಮಾಡಲಿಲ್ಲ. ದೇವೇಗೌಡರು ಬುಕ್ಕಾಪಟ್ಟಣದಿಂದ ಚಿಕ್ಕನಾಯಕನಹಳ್ಳಿಗೆ ರೋಡ್ ಶೋ ಮಾಡಿದರೆ ಜಿ.ಎಸ್.ಬಸವರಾಜು ಅವರು ಚಿ.ನಾ.ಹಳ್ಳಿ, ಮತಿಘಟ್ಟದಲ್ಲಿ ರೋಡ್ ಶೋ ಮಾಡಿ ಮತಯಾಚಿಸಿದರು. ಉಳಿದಂತೆ ಜೆಡಿಎಸ್ಗೆ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಬಿಜೆಪಿಗೆ ಶಾಸಕ ಜೆ.ಸಿ.ಮಾಧುಸ್ವಾಮಿ ಹಳ್ಳಿಹಳ್ಳಿ ಸುತ್ತಿ ತಮ್ಮ ಪಕ್ಷದ ಅಭಯರ್ಥಿ ಪರ ಮತಯಾಚಿಸಿದರು.
ಉಳಿದಂತೆ ವಿಧಾನ ಪರಿಷತ್ ಸದಸ್ಯರಾದ ಜೆಡಿಎಸ್ ಬೆಮೆಲ್ ಕಾಂತರಾಜು, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಇತ್ತ ತಿರುಗಿ ನೋಡಲಿಲ್ಲ. ಬಿಜೆಪಿಯ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮರ್, ಕಾಂಗ್ರೆಸ್ ಮುಖಂಡರಾದ ಡಾ.ಸಾಸಲುಸತೀಶ್, ಸಂತೋಷ್ ಜಯಚಂದ್ರ ಅವರು ಅಲ್ಲಲ್ಲಿ ಪ್ರಚಾರ ಮಾಡಿದ್ದು ಬಿಟ್ಟರೆ ಹಳ್ಳಿಗಳಲ್ಲಿ ಯಾರೊಬ್ಬರೂ ಪ್ರಚಾರಕ್ಕೆ ತೆರಳಲೇ ಇಲ್ಲ. ಹೀಗಾಗಿ ತಾಲೂಕಿನಲ್ಲಿ ಚುನಾವಣೆಯ ಕಾವು ಅಷ್ಟಕ್ಕಷ್ಟೇ ಎಂಬಂತೆ ಆಗಿತ್ತು. ಬಿಜೆಪಿ ಪ್ರಚಾರದ ವೇಳೆ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಗುಂಪುಘರ್ಷಣೆ ನಡೆದಿದ್ದರು ಬಿಟ್ಟರೆ ಎಲ್ಲೂ ಅಹಿತಕರ ಘಟನೆ ನಡೆಯದೆ ಶಾಂತುಯುತವಾಗಿ ಪ್ರಚಾರಕಾರ್ಯ ಮುಕ್ತಾಯವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
