ಜನಾಗ್ರಹ ಧ್ವನಿಯಾಗಲು ಎಸ್‍ಯುಸಿಐ ಬೆಂಬಲಿಸಿ

ದಾವಣಗೆರೆ:

      ಯಾವುದೇ ಅಭ್ಯರ್ಥಿ ಸಂಸತ್ತಿನಲ್ಲಿ ಜನಪರವಾಗಿ ಕೆಲಸ ಮಾಡಲು ಅವರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಜನಪರ ಹೋರಾಟಗಳಿಂದ ಹೊರಹೊಮ್ಮಿರಬೇಕು. ಹೀಗಾಗಿ ಸಂಸತ್‍ನಲ್ಲಿ ಜನರ ಸಮಸ್ಯೆಗಳನ್ನು ಪ್ರತಿಧ್ವನಿಸಲು ನಮ್ಮ ಎಸ್‍ಯುಸಿಐ ಅಭ್ಯರ್ಥಿ ಮಧು ತೊಗಲೇರಿ ಅವರನ್ನು ಮತದಾರರು ಬೆಂಬಲಿಸಬೇಕೆಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟ್ರಿಯೇಟ್ ಸದಸ್ಯ ಎಂ.ಎನ್ ಶ್ರೀರಾಮ್ ಮನವಿ ಮಾಡಿದರು.

       ನಗರದ ಜಯದೇವ ವೃತ್ತದ ಬಳಿ ತಮ್ಮ ಪಕ್ಷದ ಅಭ್ಯರ್ಥಿ ಮಧು ತೊಗಲೇರಿ ಅವರ ಚುನಾವಣಾ ಪ್ರಚಾರದ ಅಂಗವಾಗಿ ನಡೆಸಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂದು ಚುನಾವಣಾ ಕಣದಲ್ಲಿರುವ ಬಿ.ಜೆ.ಪಿ, ಕಾಂಗ್ರೆಸ್ ನಂತಹ ದೊಡ್ಡ ಪಕ್ಷಗಳ ಅಭ್ಯರ್ಥಿಗಳಿಗಾಗಲಿ, ಅಥವಾ ಇದೂವರೆಗೂ ಸಂಸತ್ತಿನಲ್ಲಿದ್ದ ಮಾಜಿ ಸಂಸದರಿಗಾಗಲೀ ಯಾವುದೇ ಹೋರಾಟದ ಹಿನ್ನೆಲೆಯಿಲ್ಲ. ಬದಲಿಗೆ 16ನೇ ಸಂಸತ್ತಿನಲ್ಲಿದ ಸಂಸದರಲ್ಲಿ ಮೂರನೇ ಒಂದರಷ್ಟು ಭಾಗದ ಸಂಸದರು ಅಪರಾಧದ ಹಿನ್ನೆಲೆಯವರಾಗಿದ್ದರು.

         ಸಾಲದೆಂಬಂತೆ ಅವರಲ್ಲಿ 400ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಿದ್ದರು. ಯಾವುದೇ ಹೋರಾಟದ ಹಿನ್ನೆಲೆಯಿರದೇ ಸ್ವತಃ ಅಪರಾಧದ ಹಿನ್ನೆಲೆಯಿಂದ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ ಕೋಟಿ-ಕೋಟಿ ಹಣ ಖರ್ಚುಮಾಡಿ ಗೆದ್ದು ಬಂದ ಸಂಸದರಿಂದ ನಾವು ನಿಜವಾದ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವೇ?” ಎಂದು ಅವರು ಪ್ರಶ್ನಸಿದರು.

        “ಎಸ್.ಯು.ಸಿ.ಐ-ಕಮ್ಯುನಿಸ್ಟ್ ಪಕ್ಷವು ಇಂದು ದೇಶದಾದ್ಯಂತ 118 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ರಾಜ್ಯದ 7 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದೆ. ಅಲ್ಲದೇ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರನ್ನು ಬೆಂಬಲಿಸುತ್ತಿದೆ. ಇಂದು ಎಲ್ಲಾ ರಾಜಕೀಯ ಪಕ್ಷಗಳು ಕೂಡ ಚುನಾವಣಾ ಪ್ರಚಾರ ಮಾಡುತ್ತಿವೆ. ಆದರೆ ಜನತೆಯ ಗಂಭೀರ ವಿಷಯಗಳು ಚರ್ಚೆಗೆ ಬರುತ್ತಿಲ್ಲ. ಕೇವಲ ಪರಸ್ಪರ ವೈಯಕ್ತಿಕ ಕೆಸರೆರೆಚಾಟದಲ್ಲಿ ಆ ಪಕ್ಷಗಳ ಮುಖಂಡರು ಮುಳುಗಿ ಹೋಗಿದ್ದಾರೆ.

       ನಿಜವಾದ ಪ್ರಜಾತಾಂತ್ರಿಕ ಚುನಾವಣೆ ಎಂದರೆ ಅಲ್ಲಿ ಜನರಿಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಬೇಕು. ಜನತೆಯ ಕುರಿತ ಪಕ್ಷಗಳ ನೀತಿಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು. ಆದರೆ ಈಗಿನ ಚುನಾಣೆಯಲ್ಲಿ ಸ್ಪರ್ಧಿಸುತ್ತಿರುವ ದೊಡ್ಡ ಪಕ್ಷಗಳು ಕೇವಲ ಆಸೆ ಆಮಿಷಗಳನ್ನು ತೋರಿಸಿ ಜನರಿಂದ ಮತಯಾಚನೆ ಮಾಡುತ್ತಿವೆ ಎಂದು ಆರೋಪಿಸಿದರು.

       2014ರ ಚುನಾವಣೆಯಲ್ಲಿ ಬಹುತೇಕ ಎಲ್ಲ ಮಾಧ್ಯಮಗಳು ನರೇಂದ್ರ ಮೋದಿಯವರ ಪರವಾದ ಅಲೆಯಿದೆ ಎಂದು ತಪ್ಪಾಗಿ ಬಿಂಬಿಸಿದವು. ಆದರೆ ಹಿಂದಿನ ಯು.ಪಿ.ಎ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತ ಜನರ ಆಕ್ರೋಶದ ಪರಿಣಾಮವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಅದು ಮೋದಿಯವರ ಅಲೆಯಲ್ಲ. ಕಾಂಗ್ರೆಸ್ ವಿರೋಧಿ ಜನಾಕ್ರೋಶದ ಫಲವಷ್ಟೆ. ಕಳೆದ 5ವರ್ಷ ಆಡಳಿತ ನಡೆಸಿದ ಮೋದಿ ಸರ್ಕಾರ ಇಂದು ಪುನಃ ಚುನಾವಣೆಗೆ ಬಂದು ಮತ್ತಷ್ಟು ಹುಸಿ ಭರವಸೆಗಳನ್ನು ನೀಡುತ್ತಿದೆ. ತಾನು ಕಳೆದ 5 ವರ್ಷಗಳಲ್ಲಿ ನೀಡಿದ ಯಾವಯಾವ ಆಶ್ವಾಸನೆಗಳನ್ನು ಪೂರೈಸಿದ್ದೇನೆ ಎಂದು ತಿಳಿಸುವ ಕನಿಷ್ಟ ಕೆಲಸವನ್ನೂ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಯಾವುದೇ ಒಂದು ಜವಾಬ್ದಾರಿಯುತ ಪಕ್ಷ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದು ತನ್ನ ಹೊಣೆ ಎಂದು ಭಾವಿಸಬೇಕು. ಅದು ಆ ಪಕ್ಷದ ಪ್ರಾಥಮಿಕ ಜವಾಬ್ದಾರಿ. ಆದರೆ ಬಿ.ಜೆ.ಪಿ ಪಕ್ಷವು ತನ್ನ ಅಚ್ಛೇದಿನ್, ಕಪ್ಪು ಹಣ ವಾಪಸಾತಿ ಮತ್ತು ಅದರಲ್ಲಿ ಪ್ರತಿ ಪ್ರಜೆಯ ಖಾತೆಗೆ 15ಲಕ್ಷ ಜಮಾ ಮಾಡುವ ಆಶ್ವಾಸನೆ, ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ, ರೈತರ ವರಮಾನ ದ್ವಿಗುಣ ಮಾಡುವ ಆಶ್ವಾಸನೆ ಈ ಎಲ್ಲಾ ಆಶ್ವಾಸನೆಗಳಲ್ಲಿ ಯಾವುದನ್ನೂ ಈಡೇರಿಸದೇ ಜನತೆಗೆ ದ್ರೋಹವೆಸಗಿದೆ ಎಂದು ಆರೋಪಿಸಿದರು.

        ಕೇವಲ ಬಂಡವಾಳಶಾಹಿ ಪರವಾದ ಜನವಿರೋಧಿ ನೀತಿಗಳನ್ನೇ ಅನುಸರಿಸುತ್ತಿರುವ ಬಿ.ಜೆ.ಪಿ ಗೆ ಬದಲಾಗಿ ಕಾಂಗ್ರೆಸ್ ಯಾವುದೇ ರೀತಿಯಲ್ಲಿಯೂ ಪರ್ಯಾಯವಾಗಲು ಸಾಧ್ಯವಿಲ್ಲ. ಏಕೆಂದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇದೇ ಜನವಿರೋಧಿ ನೀತಿಗಳನ್ನೇ ಅನುಸರಿಸಿತ್ತು. ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಜನ ಯಾವ ಸಮಸ್ಯೆಗಳನ್ನು ಎದುರಿಸಿದ್ದರೋ ಅದೇ ಸಮಸ್ಯೆಗಳನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದಲ್ಲೂ ಎದುರಿಸಿದ್ದರು.

        ಅದೇ ರೀತಿ ಜೆ.ಡಿ.ಎಸ್ ನಂತಹ ಪ್ರಾದೇಶಿಕ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಈ ಸಂದರ್ಭದಲ್ಲಿ ಜನರ ಮುಂದಿರುವ ಆಯ್ಕೆ ಯಾವುದೇ ದೊಡ್ಡ ಪಕ್ಷಗಳಾಗಲೀ ಅಥವಾ ಜೆ.ಡಿ.ಎಸ್ ನಂತಹ ಪ್ರಾದೇಶಿಕ ಪಕ್ಷಗಳಾಗಲೀ ಅಲ್ಲ. ಈ ಮೂರೂ ಪಕ್ಷಗಳ ಜನವಿರೋಧಿ ನೀತಿಗಳನ್ನು ಹೋರಾಡುವುದು ಈ ಗಳಿಗೆಯ ಅವಶ್ಯಕತೆಯಾಗಿದೆ ಎಂದರು.

      ಎಸ್.ಯು.ಸಿ.ಐ-ಕಮ್ಯುನಿಸ್ಟ್ ಪಕ್ಷ ಅಂತಹ ಹೋರಾಟಗಳನ್ನು ಕಳೆದ 40 ವರ್ಷಗಳಿಂದ ಸತತವಾಗಿ ನಡೆಸುತ್ತಿದೆ. ಈ ಹೋರಾಟಗಳಲ್ಲಿ ನಿರತವಾಗಿರುವ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಮಧು ತೊಗಲೇರಿ ಅವರು ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಂಸತ್‍ನಲ್ಲಿ ಜನ ಹೋರಾಟದ ಧ್ವನಿಯೆತ್ತಲು ಅವರನ್ನು ನೀವು ಗೆಲ್ಲಿಸಬೇಕು” ಎಂದು ಅವರು ಮನವಿಮಾಡಿದರು.ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಮಧು ತೊಗಲೇರಿ, ಪಕ್ಷದ ರಾಜ್ಯಸಮಿತಿಯ ಸದಸ್ಯ ಡಾ|| ಸುನೀತ್‍ಕುಮಾರ್, ಪಕ್ಷದ ದಾವಣಗೆರೆ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link