ಶಿಲಾಯುಗದೆಡೆಗೆ ಸಾಗುತ್ತಿರುವ ಆಲೋಚನಾ ಕ್ರಮ

ದಾವಣಗೆರೆ:

    ಇಪ್ಪತ್ತೊಂದನೇ ಶತಮಾನದಲ್ಲಿಯೂ ಭಾರತೀಯರ ಆಲೋಚನಾ ಕ್ರಮ ಶಿಲಾಯುಗದೆಡೆಗೆ ಸಾಗುತ್ತಿದೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.

      ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ ನರಗನಹಳ್ಳಿಯ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ದಿ|| ಜಿ.ಸಿ.ಸುರೇಂದ್ರಪ್ಪ ಮತ್ತು ಎಸ್.ಎಂ.ನಾಗೇಂದ್ರಯ್ಯ ಅವರ ಸ್ಮರಣಾರ್ಥ ತಾಲೂಕಿನ ನರಗನಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ರಂಗ ಶಿಕ್ಷಕ ಪ್ರಕಾಶ್ ಕೊಡಗನೂರು ಅವರ ನಿರ್ದೇಶನದಲ್ಲಿ ಏರ್ಪಡಿಸಿದ್ದ ಪಠ್ಯಾಧಾರಿತ ಗ್ಲೋಕಲ್ ರಂಗ ಪ್ರದರ್ಶನವನ್ನು ಪಾತ್ರಧಾರಿ ವಿದ್ಯಾರ್ಥಿಗಳಿಗೆ ಕಿರೀಟ ತೊಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    21ನೇ ಶತಮಾನದಲ್ಲಿ ಭಾರತದಲ್ಲಿ ಹಲವು ವೈಜ್ಞಾನಿಕ ಆವಿಷ್ಕಾರಗಳು ನಡೆದರೂ, ಜನರನ್ನು ಅಜ್ಞಾನ ಹಾಗೂ ಮೌಢ್ಯದ ಕಡೆಗೆ ಕೊಂಡ್ಡೊಯ್ಯಲಾಗುತ್ತಿದ್ದು, ಭಾರತೀಯರ ಆಲೋಚನಾ ಕ್ರಮವು ಶೀಲಾಯುಗದೆಡೆಗೆ ಹೋಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದರು.

     ದೇಶದಲ್ಲಿ ಗಿರಾಕಿ ಸಂಸ್ಕತಿ ಬೆಳೆಯುತ್ತಿದ್ದು, ಪ್ರತಿಯೊಬ್ಬ ಪ್ರಜೆಯನ್ನು ಸಹ ಗಿರಾಕಿಗಳೆಂಬುದಾಗಿ ಸಂಭೋದಿಸಲಾಗುತ್ತಿದೆ. ಅಲ್ಲದೇ, ಪ್ರಜೆಗಳು ಮತ್ತು ಜನಸೇವಕರ ಮಧ್ಯೆ ದಲ್ಲಾಳಿಗಳು ಬಂದು ನಿಂತಿದ್ದಾರೆ. ಇಂದು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು, ಸೆಲೆಬ್ರೆಟಿಗಳನ್ನಾಗಿ ರೂಪಿಸಲು ಡ್ರಾಮಾ ಜ್ಯೂನಿಯರ್ಸ್‍ದಂತಹ ರಿಯಾಲಿಟಿ ಶೋಗಳಿಗೆ ಕಳುಹಿಸುವ ಮೂಲಕ ಅಸ್ಮಿತೆಗಾಗಿ ಹೆಣಗುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.

     ಇಲ್ಲಿ ನಡೆಯುತ್ತಿರುವುದು ಚೌಕಟ್ಟಿನ ರಂಗ ಪ್ರಯೋಗವಾಗಿದ್ದು, ಇದು ನಮ್ಮ ಆಟವಲ್ಲ. ನಮ್ಮ ಭಾರತೀಯ ರಂಗ ಪರಂಪರೆಯಲ್ಲಿ ಬಯಲಿನಲ್ಲಿ ಬೃಹತ್ ಟೆಂಟ್‍ಗಳನ್ನು ಹಾಕಿ, ಪಾತ್ರಕ್ಕೆ ಬೇಕಾಗಿರುವ ಪ್ರಾಣಿ, ಪಕ್ಷಿ ಹಾಗೂ ಇತರೆ ಪರಿಕರಗಳನ್ನು ರಂಗದ ಮೇಲೆ ಕರೆ ತರಲಾಗುತ್ತದೆ. ಇಂತಹ ರಂಗ ಪರಂಪರೆಯ ಮೂಲಕ ಸಾವಿರಾರು ವರ್ಷಗಳ ನಮ್ಮ ಸಂಸ್ಕತಿಯನ್ನು ಬಿತ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

   ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರು ದಿವಂಗತರಾದರು. ಅವರು ಸೃಷ್ಟಿಸಿದ ಪಾತ್ರಗಳಾದ ರಾಮ, ಲಕ್ಷ್ಮಣ, ಸೀತೆ, ಹನುಮಂತ ಅವರುಗಳು ದಿವಂಗತರಾಗಿಲ್ಲ. ಇದಕ್ಕೆ ಪರುಷರಲ್ಲಿಯೇ ಪುರುಷೋತ್ತಮನಾದ ರಾಮ, ಭ್ರಾತೃತ್ವದ ದೊಡ್ಡ ಸಂಕೇತವಾಗಿರುವ ಲಕ್ಷ್ಮಣ, ಮಹಿಳೆಯರ ಸಾಕ್ಷಿ ಪ್ರಜ್ಞೆಯಾಗಿರುವ ಸೀತೆ ಹಾಗೂ ಇವರೆಲ್ಲರ ಸೇವಕನಾಗಿರುವ ಹನುಮಂತ ಅವರಂತಹವರ ಮೌಲ್ಯಯುತ ಪಾತ್ರಗಳೆ ಕಾರಣವಾಗಿವೆ ಎಂದು ವಿಶ್ಲೇಷಿಸಿದರು.

    12ನೇ ಶತಮಾನದಲ್ಲಿ ನಡೆ-ನುಡಿ ಸಿದ್ಧಾಂತವನ್ನು ಪ್ರತಿಪಾದಿಸಿದ ಬಸವ ಯಾವ ಕುಲವನ್ನು ನೋಡದೇ, ಸರ್ವರನ್ನು ಸಮಾನರಾಗಿ ಕಂಡರು. ಆದರೆ, 21ನೇ ಶತಮಾನದಲ್ಲಿ ಭಾರತದಲ್ಲಿ ಜಾತಿ, ಧರ್ಮ ಹಾಗೂ ಬಣ್ಣದ ಕಾರಣಕ್ಕೆ ಶ್ರೇಷ್ಠತೆಯ ರೋಗ ಅಂಟಿಕೊಂಡಿದೆ. ಇದು ನಮ್ಮ ದೇಶಕ್ಕೆ ಅಂಟಿದ ಕಳಂಕವಾಗಿದೆ. ಮಕ್ಕಳಿಗೆ ಜ್ಞಾನ ವರ್ಗಾಯಿಸದ ತಂದೆ-ತಾಯಿ ಅವಿವೇಕವನ್ನು ಟ್ರಾನ್ಸ್‍ವರ್ ಮಾಡುವ ಮೂಲಕ ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಮಾರಕವಾಗಿದಾರೆಂದು ವಿಷಾದ ವ್ಯಕ್ತಪಡಿಸಿದರು.

     ವೋಟ್ ಮಾಡುವುದೊಂದರಲ್ಲಿಯೇ ದೇಶದಲ್ಲಿ ಎಲ್ಲರು ಸಮಾನರಾಗಿದ್ದಾರೆ. ಆದರೆ, ಮತವನ್ನು ಜನರು ಮಾರಿಕೊಳ್ಳುತ್ತಾರೆ. ನಾಯಕರು ಖರೀದಿಸುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿಯೇ ಇಂದು ಪ್ರಾಮಾಣಿಕತೆ ಕುರಿತು ಮಾತನಾಡುವವರನ್ನು, ಲಂಚಾವತಾರ ವಿರೋಧಿಸುವವರನ್ನು ಸತ್ಯ ಹರಿಶ್ಚಂದ್ರ ಹಾಗೂ ಗಾಂಧಿ ಅವರಿಗೆ ಹೋಲಿಸುವ ಮೂಲಕ ಆ ಮಹಾತ್ಮರನ್ನು ಸಹ ಅಪಹಾಸ್ಯ ಮಾಡುವ ಸ್ಥಿತಿಗೆ ಜನತೆ ತಲುಪಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

     ಮಹಿಳೆಯರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನಡೆಸಿಕೊಂಡರು ಸಹ ಸಂವಿಧಾನ ಸ್ತ್ರೀಯರಿಗೆ ನೀಡಿರುವ ಹಕ್ಕುಗಳಿಂದಾಗಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಆಕಾಶಕ್ಕೆ ನೆಗೆಯುವುದರಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ವಿಶೇಷ ಸಾಧನೆ ಮಾಡಿದ್ದಾರೆ. ಆದರೆ, ಕೆಲ ಪ್ರತಿಭಾವಂತರಿಗೆ ಇನ್ನೂ ಅವಕಾಶಗಳು ಸಿಗದ ಕಾರಣ ಪ್ರತಿಭೆ ಅಲ್ಲಿಯೇ ಕಮರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

     ಇಂದು ಮಾನವ ದುರಾಸೆಯಿಂದ ಮಳೆಯ ದಿಕ್ಕು ತಪ್ಪಿಸಿದ್ದಾನೆ. ಋತುಮಾನಗಳನ್ನು ಹಾಳು ಮಾಡಿದ್ದಾನೆ. ನದಿಯ ಒಡಲು ಬಗೆಯುತ್ತಿದ್ದಾನೆ. ಬಂಡೆಯನ್ನು ಪುಡಿ, ಪುಡಿ ಮಾಡುವ ಮೂಲಕ ಪರಿಸರ ನಾಶ ಮಾಡತ್ತಿದ್ದಾನೆ. ಆದ್ದರಿಂದ ನಾಟಕಗಳು ಸಮಾಜಕ್ಕೆ ನೀತಿ ಪಾಠ ಹೇಳಿಕೊಡುವ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಬೇಕೆಂದು ಪ್ರತಿಪಾದಿಸಿದರು.

     ಕಂಗ್ಲಿಷ್ ಮೂಲಕ ಮಕ್ಕಳ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಲೇಖಕ ಪ್ರಕಾಶ್ ಕೊಡಗನೂರು ಅಧ್ಬುತ ಕೆಲಸ ಮಾಡುತ್ತಿದ್ದಾರೆ. ಇವರು ಎಲ್ಲ ಶಿಕ್ಷಕರಿಗೂ ಮಾದರಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

    ಲಯನ್ಸ್ ಜಿಲ್ಲಾ ಸಂಯೋಜಕ ವಾಸುದೇವ ರಾಯ್ಕರ್ ಮಾತನಾಡಿ, ಶಾಲಾ-ಕಾಲೇಜುಗಳ ಹಳೆಯ ವಿದ್ಯಾರ್ಥಿಗಳು ಬರೀ ಗೆಟ್, ಟು ಗೆದರ್‍ಗೆ ಸೀಮಿತ ಆಗಿರುವ ಸಂದರ್ಭದಲ್ಲಿ ಹಾಗೂ ಹೆತ್ತು ಹೊತ್ತ ತಂದೆ-ತಾಯಿಯನ್ನ ನೆನೆಯದಿರುವ ಕಾಲಘಟ್ಟದಲ್ಲಿ ನರಗನಹಳ್ಳಿಯ ಹೆಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಪ್ರಕಾಶ್ ಕೊಡಗನೂರು ಊರು ಕಟ್ಟಿದ ಹಿರಿಯರ ಸ್ಮರಣೆಗಾಗಿ ರಂಗ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲಕ ಭಾರತ ಜಗತ್ತಿನ ಗಮನ ಸೆಳೆದಿದ್ದು, ಈ ಕಾವ್ಯಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ, ಇಂದು ಇಂತಹ ಪೌರಾಣಿಕ ನಾಟಕಗಳು ಮರೆಯಾಗಿ, ಆಧುನಿಕ ಶೈಲಿಯ ನಾಟಕಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ಜೆ.ಹೆಚ್.ಪಟೇಲ್ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು ಮಾತನಾಡಿ, ಪ್ರತಿಹಳ್ಳಿಗಳಲ್ಲೂ ಪ್ರಕಾಶ್ ಕೊಡಗನೂರು ಅವರಂತಹ ಶಿಕ್ಷಕರು ಬಂದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಪ್ರಕಾಶ್ ಅವರಂತಹ ಒಬ್ಬ ಶಿಕ್ಷಕ ಕ್ರಿಯಾಶೀಲರಾಗಿ ಕೆಲಸ ಮಾಡಿದರೆ, ನಮಗೂ ತೊಂದರೆ ಬರುತ್ತದೆಂಬ ಕಾರಣಕ್ಕೆ ಇನ್ನುಳಿದ ಶಿಕ್ಷಕರು ಕ್ರಿಯಾಶೀಲರಾಗಿ ಉಳಿಯಲು ಬಿಡುವುದಿಲ್ಲ ಎಂದರು.

      ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಪ್ರಕಾಶ್ ಕೊಡಗನೂರು, ಇಡೀ ಊರಿಗೆ ಆಧಾರಸ್ತಂಭವಾಗಿ ನಿಂತಿದ್ದ ಜಿ.ಸಿ.ಸುರೇಂದ್ರಪ್ಪ ಮತ್ತು ಎಸ್.ಎಂ.ನಾಗೇಂದ್ರಯ್ಯ ಅವರ ಸ್ಮರಣಾರ್ಥದಲ್ಲಿ ಈ ರಂಗ ಪ್ರದರ್ಶನ ಏರ್ಪಡಿಸಿದ್ದು, ಗ್ಲೋಬಲ್ ಭಾಷೆಯಾಗಿರುವ ಇಂಗ್ಲಿಷ್ ಅನ್ನು ಸ್ಥಳೀಯ ಮಕ್ಕಳು ಲೋಕಲ್ (ಸ್ಥಳೀಯ) ಸೌಂಡ್ ನೀಡುವ ಮೂಲಕ, ಸ್ಥಳೀಯ ಭಾಷೆಯಾಗಿರುವ ಕನ್ನಡದ ಆವಾ-ಭಾವದೊಂದಿಗೆ ಅಭಿನಯಿಸುವುದೇ ಗ್ಲೋಕಲ್ ರಂಗ ಪ್ರದರ್ಶನವಾಗಿದೆ ಎಂದು ಹೇಳಿದರು.

     ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ಎನ್.ಆರ್.ಸೌಮ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಎಂ.ಟಿ.ಶರಣಪ್ಪ, ನಗರನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಯಲ್ಲಪ್ಪ ಕಡೇಮನಿ ಉಪಸ್ಥಿತರಿದ್ದರು. ಶಿವಯೋಗಿ ಹಿರೇಮಠ ಸ್ವಾಗತಿಸಿದರು. ಸಿರಿಗೆರೆ ನಾಗರಾಜ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link