ತಾಲ್ಲೂಕಿನಲ್ಲಿ ಜೂಜಿನ ಅಬ್ಬರ ವರದಿ : ಇಬ್ಬರು ಪೊಲೀಸರ ಅಮಾನತು

ತುಮಕೂರು:

     ಪಾವಗಡ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಜೂಜು, ಮಟ್ಕಾ ಕುರಿತು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅರಸೀಕೆರೆ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.

      ಅರಸೀಕೆರೆ ಠಾಣೆಯ ಮಂಜುನಾಥ್ ಕೊಲಾಲ ಮತ್ತು ಡಿ.ಉಮೇಶ್ ಎಂಬುವರೇ ಅಮಾನತುಗೊಳಗಾಗಿರುವ ಪೊಲೀಸರು. ಜೂಜು, ಮಟ್ಕಾ ತಡೆಯುವಲ್ಲಿ ವಿಫಲರಾಗಿರುವುದು, ಜೂಜಾಟ ನಡೆಸುವವರೊಂದಿಗೆ ಶಾಮೀಲಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕುರಿತ ಆರೋಪ ಇವರ ಮೇಲೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ.

      ತಾಲ್ಲೂಕಿನಲ್ಲಿ ಮಟ್ಕಾ, ಜೂಜು ಹತ್ತಿಕ್ಕಲು ಎಸ್ಪಿ ಅವರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಅಲ್ಲದೆ, ಪಾವಗಡದಲ್ಲಿ ಪೊಲೀಸ್ ಅಧಿಕಾರಿಗಳು ಸಭೆಯೊಂದನ್ನು ನಡೆಸಿ ಜೂಜು ಹತ್ತಿಕ್ಕುವ ಬಗ್ಗೆ ಹಾಗೂ ಪತ್ರಿಕೆಯಲ್ಲಿ ಬಂದ ವರದಿಗಳ ಬಗ್ಗೆ ಚರ್ಚಿಸಿದ್ದಾರೆಂಬ ಮಾಹಿತಿಗಳು ಲಭ್ಯವಾಗಿವೆ.

      ಬರ ಪೀಡಿತ ಪಾವಗಡ ತಾಲ್ಲೂಕಿನಲ್ಲಿ ಬರದ ಬವಣೆ ಜನರನ್ನು ಕಾಡುತ್ತಿದ್ದು, ಜೂಜು, ಮಟ್ಕಾ ದಂಧೆಗಳಿಗೆ ಅಲ್ಲಿನ ಅನೇಕರು ಬಲಿಯಾಗುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ತಮ್ಮ ಸಂಸಾರಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಕುಟುಂಬಗಳು ಮಟ್ಕಾದಿಂದಾಗಿ ಬೀದಿಪಾಲಾಗಿವೆ.

ಮಟ್ಕಾದಿಂದ ನೀದಿಗೆ ಬಂದ ಬಡ ಕುಟುಂಬಗಳು..!!!

 

        ತಾಲ್ಲೂಕಿನ ಅರಸೀಕೆರೆ, ವೈ.ಎನ್.ಹೊಸಕೋಟೆ, ತಿರುಮಣಿ ಮತ್ತು ಪಾವಗಡ ಪಟ್ಟಣದ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜೂಜಾಟವು ರಾಜಾರೋಷವಾಗಿ ನಡೆಯುತ್ತಿದೆ ಎಂದು ಜನ ಹೇಳಿದರೂ ಪೊಲೀಸರು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.

ಜೂಜಾಟದ ತಾಣಗಳು :

      ಶೈಲಾಪುರ, ಬೆಳ್ಳಿಬಟ್ಲು, ಯಲ್ಲಪ್ಪನಾಯಕನಹಳ್ಳಿ, ದೊಡ್ಡಹಳ್ಳಿ, ಆಂಧ್ರದ ಕಂಬದೂರು, ನಾಗಲಾಪುರ ಕೆರೆಯ ವ್ಯಾಪ್ತಿಯಲ್ಲಿ, ಬೂದಿಬೆಟ್ಟ, ನಾಗೇನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿ, ಪೊನ್ನಸಮುದ್ರ, ಮೀನುಗುಂಟೆನಹಳ್ಳಿಯಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ಸಹ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಏಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

       ಪಾವಗಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಬೆಟ್ಟ ಹತ್ತಿರ ತೋಟವೊಂದರಲ್ಲಿ, ಜಾಜುರಾಯ ನಹಳ್ಳಿ ಹಾಗೂ ಕೃಷ್ಣಪುರ ಮಧ್ಯ ಹಳ್ಳದಲ್ಲಿ ಎಗ್ಗಿಲ್ಲದೆ ಜೂಜಾಟ ನಡೆಯುತ್ತಿದೆ. ಆಂಧ್ರದ ಗಡಿ ಭಾಗದ ಕನ್ನಮೇಡಿ ರಾಳ್ಳುಪಲ್ಲಿ ಪ್ರಾಂತ್ಯದಲ್ಲಿ ಇಸ್ಪೀಟನ್ನು ರಾಜಾರೋಷವಾಗಿ ಆಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿದ್ದು, ಈ ಬಗ್ಗೆ `ಪ್ರಜಾಪ್ರಗತಿ’ಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.


         ಇಲಾಖೆಯಲ್ಲಿ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ತನ್ನ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಹಾಗೂ ಲೋಪವೆಸಗಿದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು. ಈ ಬಗ್ಗೆ ಜಿಲ್ಲಾ ಪೊಲೀಸ್ ಕಛೇರಿಯ ವಿಶೇಷ ಪತ್ತೆ ದಳದಿಂದ ಮಾಹಿತಿ ಸಂಗ್ರಹಿಸಿ ಯಾವುದೇ ಮೂಲೆಯಲ್ಲಿ ಅಕ್ರಮ ಜೂಜಾಟ, ಮಟ್ಕಾ ನಡೆಯದಂತೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆಯಾ ಠಾಣಾ ಎಸ್.ಬಿ. ಸಿಬ್ಬಂದಿ ಹಾಗೂ ಠಾಣಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು.

ಕೋ.ನ.ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link