ಕೋಲಾರ:
ಕೆಸಿ ವ್ಯಾಲಿ ಯೋಜನೆಯಡಿಯಲ್ಲಿ ಬರಪೀಡಿತ ಜಿಲ್ಲೆ ಕೋಲಾರಕ್ಕೆ ಹರಿಸಲಾಗಿರುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಕೆಸಿ ವ್ಯಾಲಿ ಯೋಜನೆಯಡಿ ಹರಿಸಿರುವ ಬೆಂಗಳೂರಿನ ಸಂಸ್ಕರಿಸಿದ ನೀರು ಹಸಿರು ಬಣ್ಣಕ್ಕೆ ಪರಿವರ್ತನೆಯಾಗಿ ತಾಲೂಕಿನ ನರಸಾಪುರ ಕೆರೆಯಿಂದ ಹರಿಯುತ್ತಿದ್ದು, ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕೆಸಿ ವ್ಯಾಲಿ ಯೋಜನೆಯನ್ನು 1342 ಕೋಟಿ ರೂ.ವೆಚ್ಚದಲ್ಲಿ ಜಾರಿಗೆ ತರಲಾಗಿದೆ. ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ಕೊಳಚೆ ನೀರು ಹರಿಸುವ ಯೋಜನೆ ಇದಾಗಿದ್ದು ಅನುಷ್ಠಾನಕ್ಕೂ ಮೊದಲಿನಿಂದಲೂ ಅಪಸ್ವರ, ಆಕ್ಷೇಪ ನೀರಾವರಿ ಹೋರಾಟಗಾರರಿಂದ ವ್ಯಕ್ತವಾಗುತ್ತಿದೆ. ನೀರಿನ ಗುಣಮಟ್ಟ ಖಾತ್ರಿ ಹಾಗೂ ಮೂರನೆ ಹಂತದಲ್ಲಿ ಶುದ್ಧೀಕರಿಸಿ ಹರಿಸಬೇಕೆಂದು ಒತ್ತಾಯಿಸಿದ್ದ ಹೋರಾಟಗಾರರು, ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿ, ನೀರು ಹರಿಸುವುದಕ್ಕೆ ತಡೆಯಾಜ್ಞೆ ತಂದಿದ್ದರು.
ಈಗ ನ್ಯಾಯಾಲಯ ತಡೆಯಾಜ್ಞೆ ತೆರವಾಗಿದ್ದು, ಮೂರನೆ ಹಂತದಲ್ಲಿ ಶುದ್ಧೀಕರಣವಾಗಬೇಕೆಂಬ ಕೂಗಿನ ನಡುವೆ ಕೆಸಿ ವ್ಯಾಲಿ ನೀರು ಹರಿಯುತ್ತಿದೆ. ತಡೆಯಾಜ್ಞೆ ತೆರವಾದ ಬಳಿಕ ಒಟ್ಟು 12 ಕೆರೆಗಳು ತುಂಬಿ ಹರಿಯುತ್ತಿವೆ.
ಮೂರನೆ ಹಂತದಲ್ಲಿ ಶುದ್ಧೀಕರಿಸಿ ಹರಿಸಬೇಕೆಂಬ ಒತ್ತಾಯದ ನಡುವೆ ಜಾರಿಗೊಳಿಸಿದ ಈ ಯೋಜನೆಯಡಿ ನೀರು ಹರಿಸಿ ಕೆಲ ದಿನದಲ್ಲಿ ನೊರೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ