ತಡವಾದ ಮಳೆ :ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕೃಷಿ ಚಟುವಟಿಕೆ

ಹರಪನಹಳ್ಳಿ:

     ಮುಂಗಾರುಪೂರ್ವ ಮಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿಲ್ಲ.

    ತಾಲ್ಲೂಕಿನಲ್ಲಿ ಜನವರಿಯಿಂದ ಮೇ 23ರವರೆಗೆ ಒಟ್ಟು 115 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ವಾಸ್ತವ್ಯವಾಗಿ ಕೇವಲ 40 ಮಿ,.ಮೀ ಮಳೆ ಸುರಿದಿದ್ದು, ಶೇ 60 ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷದ ಅಂದರೆ ಜನವರಿ 1ರಿಂದ ಮೇ 15ರವರೆಗೆ ತಾಲ್ಲೂಕಿನಲ್ಲಿ 86 ಮಿ.ಮೀ. ವಾಡಿಕೆಗಿಂತ 147 ಮಿ.ಮೀ ಮಳೆಯಾಗಿತ್ತು. ವಾಡಿಕೆಗಿಂತ ಶೇ 70ರಷ್ಟು ಹೆಚ್ಚು ಮಳೆ ಸುರಿದಿತ್ತು. ಈಗ ಕೊರತೆ ಉಂಟಾಗಿ ಕೃಷಿ ಕಾಯಕಕ್ಕೆ ಹಿನ್ನಡೆ ಆಗಿದೆ.

     ಕಳೆದ 25 ದಿನಗಳಲ್ಲಿ ಭರಣಿ ಹಾಗೂ ಕೃತಿಕಾ ಮಳೆ ಸುರಿದಿದ್ದರಿಂದ ಭೂಮಿಯ ತೇವಾಂಶ ಅಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಇದನ್ನೇ ಆಧರಿಸಿ ರೈತರು ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ಬಾವಿಹಳ್ಳಿ ರೈತರು ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ. ಈ ಗ್ರಾಮ ಹೊರತುಪಡಿಸಿದರೆ ತಾಲ್ಲೂಕಿನ ಯಾವ ಭಾಗದಲ್ಲೂ ಬಿತ್ತನೆ ಚಟುವಟಿಕೆ ಆರಂಭಗೊಂಡಿಲ್ಲ ಎಂಬುದು ಕೃಷಿ ಇಲಾಖೆಯ ಮಾಹಿತಿ.

     ಕಳೆದ ವರ್ಷ 80,230 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದ ಕೃಷಿ ಇಲಾಖೆ, ಈ ವರ್ಷ ತಾಲ್ಲೂಕಿನಲ್ಲಿ 84,180 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಒಟ್ಟು 2.51 ಲಕ್ಷ ಟನ್ ಉತ್ಪಾದನೆ ಗುರಿ ಇದೆ. ರೈತರಿಗೆ ಸಮರ್ಪಕ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಲ್ಕು ಹೋಬಳಿಗಳ ರೈತ ಸಂಪರ್ಕ ಕೇಂದ್ರ ಸೇರಿ ಒಟ್ಟು 9 ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ.

     ಶೇಂಗಾ, ಹೆಸರು, ಉದ್ದು, ಜೋಳ, ತೊಗರಿ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರಿಗೆ ಅಗತ್ಯವಾಗಿರುವ ಔಷೋಧೋಪಚಾರ, ಕೃಷಿ ಪರಿಕರ ಒದಗಿಸಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. ಅಗತ್ಯ ಎಲ್ಲ ಕೃಷಿ ಪರಿಕರಗಳು ಸಂಗ್ರಹವಿದೆ ಎಂದು ಪ್ರಬಾರಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಸಕ್ರೇಗೌಡರ ತಿಳಿಸಿದ್ದಾರೆ.

ಜಾಗೃತಿ:

       ಕೃಷಿ ಇಲಾಖೆ ಸರ್ಕಾರದ ಅನುಷ್ಠಾನ ಯೋಜನೆಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಮೇ 24 ರಿಂದ 27ರವರೆಗೆ ಕೃಷಿ ಆಂದೋಲನ ಸ್ಥಬ್ಧ ಚಿತ್ರವಾಹನ ಸಂಚಾರ ನಡೆಸುತ್ತಿದೆ.

       ರೈತ ಸಂಪರ್ಕ ಕೇಂದ್ರಗಳು: ಹರಪನಹಳ್ಳಿಯ ಎಪಿಎಂಸಿ ಆವರಣ, ಆರ್.ಎಸ್.ಕೆ. ತೆಲಗಿ, ಆರ್.ಎಸ್.ಕೆ. ಅರಸೀಕೆರೆ, ಆರ್.ಎಸ್.ಕೆ. ಚಿಗಟೇರಿ, ಪಿಎಸಿಎಸ್ ಹರಕನಾಳು, ವಿ.ಎಸ್.ಎಸ್.ಎನ್. ಹಲವಾಗಲು, ಎಣ್ಣೆಬೀಜ ಬೆಳಗಾರರ ಸಹಕಾರ ಸಂಘ ಹಿರೇಮೆಗಳಗೆರೆ, ಅಕ್ಕಮಹಾದೇವಿ ವಿವಿದ್ದೋದ್ದೇಶ ಸಹಕಾರ ಸಂಘ ಸಾಸ್ವಿಹಳ್ಳಿ, ಎಣ್ಣೆಬೀಜ ಬೆಳಗಾರರ ಸಹಕಾರ ಸಂಘ ನಂದಿಬೇವೂರು ಈ ಸ್ಥಳಗಳಲ್ಲಿ ಬೀಜ ಮರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

     `ಪ್ರತಿ ವರ್ಷ ಈ ವೇಳೆಗೆ ಭೂಮಿ ಹದಗೊಂಡು ಭೂತಾಯಿಗೆ ಧಾನ್ಯ ಅರ್ಪಣೆ ಮಾಡುತ್ತಿದ್ದೇವು. ಯಾಕೋ ಈ ಬಾರಿ ವರುಣದೇವ ಮುನಿಸಿಕೊಂಡಿದ್ದು, ಹೀಗಾಗಿ ಕೃಷಿ ಚಟುವಟಿಕೆಗಳು ಗರಿಗೆದರಿಲ್ಲ. ವಾರದೊಳಗೆ ಮಳೆ ಸುರಿದರೆ ಬಿತ್ತನೆ ಕಾರ್ಯಕ್ಕೆ ಅನುವು ಆಗುತ್ತದೆ’ ಎಂಬುದು ಪಟ್ಟಣದ ರೈತ ದಾದಾಪುರ ಸಣ್ಣ ಹನುಮಂತಪ್ಪ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link