ಬಳ್ಳಾರಿ :
ಎರಡನೇ ಬಾರಿಗೆ ದೇಶದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈ ಬಾರಿ ರಾಮ ಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭೆಯಲ್ಲಿ ಬಹುಮತ ಇತ್ತು ಆದರೆ ರಾಜ್ಯ ಸಭೆಯಲ್ಲಿ ಇರಲಿಲ್ಲ ಮುಂದಿನ ವರ್ಷ ರಾಜ್ಯ ಸಭೆಯಲ್ಲೂ ಬಿಜೆಪಿಗೆ ಬಹುಮತ ದೊರಕಲಿದ್ದು ಇದರಿಂದಾಗಿಜನತೆಗೆ ಕೊಟ್ಟ ಮಾತಿನಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಖಚಿತ ಎಂದರು.ಈ ಕುರಿತ ವಿವಾದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದನ್ನು ಗಮನಕ್ಕೆ ತಂದಾಗ ನ್ಯಾಯಾಲಯದಿಂದ ತೀರ್ಪು ನಮ್ಮ ಪರ ಬರುತ್ತದೆಂಬ ವಿಶ್ವಾಸ ನಮಗಿದೆ ಎಂದರು.
ಈ ವರೆಗೆ ನಮಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಅಪಾರ ಗೌರವ ಇತ್ತು. ಆದರೆ ಅವರು ಈಗ ಶ್ರೀರಾಮ ಎನ್ನುವ ಹೆಸರನ್ನು ವಿವಾದ ಮಾಡುತ್ತಿರುವ ಬಗ್ಗೆ ವಯಕ್ತಿಕವಾಗಿ ಅಸಮಾಧಾನವಿದೆ. ಅವರ ನಿಲುವು ರಾಷ್ಟ್ರ ವಿರೋಧಿತನದಿಂದ ಕೂಡಿದೆ. ಮುಖ್ಯಮಂತ್ರಿ ಆದವರು ತಾಳ್ಮೆಯಿಂದ ಕೂಡಿರಬೇಕು.ತಾಳ್ಮೆ ಇದ್ದರೆ ಮಾತ್ರ ಅವರಿಗೆ ಉತ್ತಮ ಭವಿಷ್ಯ. ಬಹಳ ಬಿರುಸಿನಿಂದ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ, ರಾಜಕೀಯಕ್ಕಾಗಿ ಅವರು ಬಂಗ್ಲಾದೇಶದ -ನುಸುಳು ಕೋರರಿಗೆ ಅವಕಾಶ ನೀಡ್ತಿದ್ದಾರೆಂದು ಆರೋಪಿಸಿದರು.
ಗೊಂದಲದ ಸರ್ಕಾರ:
ರಾಜ್ಯದಲ್ಲಿ ಗೊಂದಲದ ಸರ್ಕಾರ ಎಂದು ನಾನು ಮೊದಲೇ ಹೇಳಿದ್ದೆ ಈಗ ಅದೇ ಆಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿಸರ್ಕಾರ ನಡೆಸುತ್ತಿದ್ದು ಜಾತ್ಯಾತೀತ ಪಕ್ಷವಾಗಿರುವ ಬಿಜೆಪಿಯನ್ನು ಸೇರಿಸಿಕೊಂಡು ಸರ್ಕಾರ ನಡೆಸಲಿ, ಬಿಜೆಪಿಯೂ ಸಹ ಭಾರತ ಸಂವಿಧಾನವನ್ನು ಒಪ್ಪಿಕೊಂಡಿರುವ ಪಕ್ಷ ಎಂದರು. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ನಿವಾರಣೆಗೆ ಮುಂದಾಗದೆ ಅಧಿಕಾರಕ್ಕಾಗಿ ಕಚ್ಚಾಡಿದರೆ ಮತ್ತೆ ಚುನಾವಣೆ ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮೂರು ಪಕ್ಷಗಳು ಸೇರಿ ಸೌಹಾರ್ದ ಯುತವಾಗಿ ರಾಜ್ಯ ಭಾರ ನಡೆಸಿ
ದೇಶಕ್ಕೆ ಮಾದರಿಯಾಗಲಿ ಎಂದರು. ಇದನ್ನು ಬಿಜೆಪಿಯವರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ ಪ್ರಯತ್ನ ಆಗಲಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/pejavar.gif)