ಹಗರಿಬೊಮ್ಮನಹಳ್ಳಿ:
ವರ್ಷಕ್ಕೊಮ್ಮೆ ಜೂನ್ 05ರಂದು ಪರಿಸರ ದಿನಾಚರಣೆ ಬರುತ್ತೆ, ಹೋಗುತ್ತೆ. ಆ ದಿನ ಮಾತ್ರ ಪರಿಸರ ಕಾಳಜಿ ಎಲ್ಲರಲ್ಲೂ ಜಾಗೃತಿಯಾಗಿಬಿಡುತ್ತೆ. ಇದ್ದಕ್ಕಿದಂತೆ ಶಪತ ಮಾಡಿಬಿಟ್ಟು, ಸಸಿ ನೆಡೊಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಮುಗಿಯಿತು, ಅವುಗಳ ಬೆಳವಣಿಗೆಯತ್ತ ಯಾರ ಚಿತ್ತ ಇರುವುದಿಲ್ಲ. ಈ ಪರಿಪಾಟಕ್ಕೆ ತದ್ವಿರುದ್ಧ ಎನ್ನುವಂತೆ ಪಟ್ಟಣದ ಮೈತ್ರಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ನವರಿಂದ ಪರಿಸರ ಕಾಳಜಿ ನಿರಂತರ ಇರಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದು ಸೀಡ್ಬಾಲ್ ತಯಾರಿಕೆಯ ಮೂಲಕ ಅರಣ್ಯೀಕರಣಕ್ಕೆ ಮುಂದಾಗಿದ್ದಾರೆ.
ಏನಿದು ಸೀಡ್ಬಾಲ್ ತಯಾರಿಕೆ: ಸೀಡ್ಬಾಲ್ ತಯಾರಿಕೆ ಎಂದರೆ ಫಲವತ್ತತೆಯ ಮಣ್ಣಿನೊಂದಿಗೆ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣಮಾಡಿ, ಸಣ್ಣಸಣ್ಣ ಹುಂಡಿಗಳನ್ನು ತಯಾರಿಸುವುದು. ಅದರೊಳಗೆ ವಿವಿಧ ತಳಿಯ ಬೀಜಗಳನ್ನು ಇಡುವುದು, ನಂತರ ನೆರಳಿನಲ್ಲಿಯೇ ಅವುಗಳನ್ನು ಒಣಗಿಸುವುದು. ನಂತರ ಅವುಗಳನ್ನು ಅರಣ್ಯ ಪ್ರದೇಶ ಮತ್ತಿತರ ಕಡೆ ಎಸೆದುಬರುವುದರಿಂದ ಮಳೆಗಾಲದಲ್ಲಿ ಆ ಬೀಜವನ್ನು ಹೊಂದಿದ ಮಣ್ಣಿನ ಹುಂಡಿಗೆ ನೀರು ಬೀಳುವುದರಿಂದ ನಾಲ್ಕಾರು ದಿನಗಳಲ್ಲಿ ಬೀಜ ಮೊಳಕೆಹೊಡೆದು ಸಸಿಗಳಾಗಿ ಬೆಳೆಯುತ್ತವೆ. ಅಲ್ಲದೆ ನೈಸರ್ಗಿಕವಾಗಿ ಮರಗಳಾಗಿ ಬೆಳೆಯುತ್ತವೆ.
ಮೈತ್ರಿ ಟ್ರಸ್ಟ್ನಿಂದ 15ಸಾವಿರ ಸೀಡ್ಬಾಲ್ ಗುರಿ: ಈಗಾಗಲೇ ಅಂದುಕೊಂಡತೆ 17ಜನ ಸದಸ್ಯರ ಬಲದ ಮೈತ್ರಿ ಟ್ರಸ್ಟ್ನಿಂದ 15ಸಾವಿರ ಸೀಡ್ಬಾಲ್ ತಯಾರಿಕೆಯ ಗುರಿಯನ್ನು ಹೊಂದಿದೆ. ಇದಕ್ಕಾಗಿ ಟ್ರಸ್ಟ್ ತಯಾರಿಯಲ್ಲಿ ತೊಡಗಿದ್ದು, ಒಂದು ಟ್ರ್ಯಾಕ್ಟರ್ ಜೆಡಿಮಣ್ಣು ಮತ್ತು ಒಂದು ಟ್ರ್ಯಾಕ್ಟರ್ ಕುರಿ ಮತ್ತು ಹಸುವಿನ ಸಗಣೆ (ಕೊಟ್ಟಿಗೆ) ಗೊಬ್ಬರ ಕೂಡ ಸಂಗ್ರಹಿಸಲಾಗಿದೆ.
ಪಟ್ಟಣದ ವಿಷ್ಣು ಚಿತ್ರಮಂದಿರದ ಹಿಂಭಾಗದಲ್ಲಿರುವ ಗೋಡನ್ವೊಂದರಲ್ಲಿ ಈ ಸೀಡ್ಬಾಲ್ ತಯಾರಿಕೆ ಕಾರ್ಯ ಆರಂಭವಾಗಿದ್ದು, ಮೊದಲು ಅಂತರ್ಜಾಲಗಳ ಮೂಲಕ ಬಿತ್ತರಗೊಂಡಾಗ ವಿವಿಧ ಸಂಘಟನೆಗಳು ಕೈಜೋಡಿಸಲು ಮುಂದಾದವು. ಬಹುತೇಕ ವರ್ತಕರು, ಈ ಮೂಲಕ ವಾಯುವಿಹಾರಕ್ಕೆ ಬರುವ ಜನರು, ಸಂಘಟನೆಗಳು ತಾವು ಸೀಡ್ಬಾಲ್ಗಳನ್ನು ತಯಾರಿಸುತ್ತೇವೆ ಎಂದು ಸ್ವ-ಇಚ್ಛೆಯಿಂದ ಮುಂದೆ ಬಂದರು.
ಮಹಿಳಾ ಸಂಘಟನೆಗಳು, ಬಿಜಿವಿಎಸ್, ಕಾಲೇಜ್ ಹಾಸ್ಟಲ್ ವಿದ್ಯಾರ್ಥಿನಿಯರು ಸೇರುತ್ತಿದ್ದಾರೆ, ಅವರಿಗೆ ಸಿಗುವ ಸಮಯದಲ್ಲಿ ಅಲ್ಲಿಗೆ ಬಂದು ಸೀಡ್ಬಾಲ್ ತಯಾರಿಕೆಯಲ್ಲಿ ಮುಂದಾಗುತ್ತಿದ್ದಾರೆ. ಒಟ್ಟಾರೆ ಇಲ್ಲಿಯವರೆಗೂ 10ಸಾವಿರ ಸೀಡ್ಬಾಲ್ಗಳು ತಯಾರಾಗಿದ್ದು, ಈಗ ಹುಂಡಿಗಳು ಒಣಗುವುದಕ್ಕಾಗಿ ಕಾಯುತ್ತಿದ್ದಾರೆ. ಇದರಲ್ಲಿ ಬೇವು, ಹುಣಸೆ, ಹೊಂಗೆ, ನೆರಳೆ ಬೀಜಗಳಿದ್ದು. ಬೀಜಗಳನ್ನು ಟ್ರಸ್ಟ್ನಿಂದ ಖರೀದಿಸುತ್ತಾರೆ. ಇತರ ಸಂಘಟನೆಗಳು ಸಹ ಉಚಿತವಾಗಿ ಇಲ್ಲಿಗೆ ಬೀಜಗಳನ್ನು ಕಳಿಸಿಕೊಡುತ್ತಿದ್ದಾರೆ.
ಎಲ್ಲೆಲ್ಲಿ ಹಾಕುತ್ತಾರೆ? ಶೇ.80ರಷ್ಟು ಯಶಸ್ವಿ : ಸಸಿಗಳನ್ನು ನೆಡುವುದಾದರೆ, ಅವುಗಳಿಗೆ ಗುಂಡಿಗಳನ್ನು ತೋಡಬೇಕು, ನೀರುಣಿಸಬೇಕು ಏನೆಲ್ಲ ಪ್ರಯತ್ನಮಾಡಬೇಕು. ಆದರೆ, ಈ ಸೀಡ್ಬಾಲ್ಗಳ ತಯಾರಿಕೆಯ ನಂತರ ತಾಲೂಕಿನ ಬೆಣಕಲ್ಲು, ಆನೆಕಲ್ಲು ಅರಣ್ಯ ಪ್ರದೇಶಗಳಲ್ಲಿ, ಕೆರೆ, ಕುಂಟೆಗಳಿರುವ ಪ್ರದೇಶಗಳ ಸುತ್ತಮುತ್ತ ಸೀಡ್ಬಾಲ್ಗಳನ್ನು ಎಸೆದುಬರುತ್ತಾರೆ. ಬಹುತೇಕ ಸೀಡ್ಬಾಲ್ಗಳಲ್ಲಿ ಶೇ.80ರಷ್ಟು ಮೊಳಕೆ ಮೂಡಿ ಬೆಳೆಯುತ್ತವೆ. ನಂತರ ಅವುಗಳ ಬೆಳವಣಿಗೆ ಗುರುತ್ತಿಸುವುದಕ್ಕಾಗಿಯೇ ತಂಡಗಳನ್ನು ರಚಿಸಲಾಗಿದ್ದು, ಸಸಿಗಳ ಬೆಳವಣಿಗೆಯ ಹಂತಗಳನ್ನು ಗುರುತಿಸಲಾಗುತ್ತದೆ.
ಮುಂದಿನ ವರ್ಷ ಈ ಸಂಘಟನೆಯಿಂದ ಮತ್ತಷ್ಟು ಕನಸ್ಸುಗಳನ್ನು ಹೊಂದಿದ್ದು, ಈ ಮೂಲಕವೇ ತಾಲೂಕನ್ನು ಹಸಿರೀಕರಣ ಮಾಡಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದಾರೆ. ಇವರ ಯಶಸ್ಸಿಗೆ ಅರಣ್ಯ ಇಲಾಖೆ ಕೈಜೋಡಿಸಿದರೆ ಉತ್ತಮ. ಕೊನೇ ಪಕ್ಷ ಬೀಜವನ್ನಾದರೂ ಸರಬರಾಜುಮಾಡಿದರೆ ಸಾಕು. ಅದಕ್ಕೂ ಶ್ರೀಕೃಷ್ಣನ ಲೆಕ್ಕಕ್ಕಾಗಿ ಕಾದುಕುಳಿತರೆ ಇಲಾಖೆ ಮಾಡಬೇಕಾದ ಕೆಲಸ ಸಂಘಟನೆಗಳು ಮಾಡಿತೋರಿಸುತ್ತವೆ ಎನ್ನುವುದರಲ್ಲಿ ಎರಡುಮಾತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
