ಆಧಾರ್ ಸಮಸ್ಯೆ ಪರಿಹರಿಸಲು ಇನ್ನೆಷ್ಟು ಬಲಿ ಬೇಕು?

ಹುಳಿಯಾರು:

      ಕಳೆದ ಒಂದು ವರ್ಷದಿಂದಲೂ ತಾಲೂಕಿನಲ್ಲಿ ಆಧಾರ್ ಸಮಸ್ಯೆಯಿದ್ದು ಶಾಲಾ ಬಾಲಕ ಇದಕ್ಕೆ ಬಲಿಯಾಗಿದ್ದಾನೆ. ಇನ್ನು ಎಷ್ಟು ಜನರ ಬಲಿ ಬೇಕಿದೆ ಸಮಸ್ಯೆ ಸರಿಪಡಿಸಲು ಎಂದು ಸಾರ್ವಜನಿಕರು ತಹಶೀಲ್ದಾರ್ ತೇಜಸ್ವಿನಿ ಅವರನ್ನು ಆಕ್ರೋಶದಿಂದ ಪ್ರಶ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಹುಳಿಯಾರಿನಲ್ಲಿ ಜರುಗಿದೆ.

     ಆಧಾರ್ ತಿದ್ದುಪಡಿಗಾಗಿ ಯಳನಾಡುವಿಗೆ ತೆರಳಿ ಸಾವನ್ನಪ್ಪಿದ ಬಳ್ಳೆಕಟ್ಟೆ ಬಾಲಕನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹುಳಿಯಾರಿನ ಸರ್ಕಾರಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ನಾಡಕಛೇರಿ ಸೇರಿದಂತೆ ಅನೇಕ ಕಡೆ ಆಧಾರ್ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದರೆ ನಮ್ಮ ಮಗ ಯಳನಾಡುವಿಗೆ ಅದರಲ್ಲೂ ಬೆಳ್ಳಂಬೆಳಿಗ್ಗೆ ಬರುತ್ತಿರಲಿಲ್ಲ. ಎಲ್ಲೋ ಒಂದು ಕಡೆ ಸಮಯ ಸಿಕ್ಕಾಗ ತಿದ್ದುಪಡಿ ಮಾಡಿಸಿಕೊಳ್ಳು ತ್ತಿದ್ದೆವು ವಿನಹ ಊಟತಿಂಡಿ, ಕೆಲಸ ಕಾರ್ಯ ಬಿಟ್ಟು ಕ್ಯೂ ನಿಲ್ಲುತ್ತಿರಲಿಲ್ಲ. ಒಂದು ವರ್ಷದಿಂದಲೂ ಇರುವ ಸಮಸ್ಯೆ ಸರಿಪಡಿಸದೆ ನಿರ್ಲಕ್ಷ್ಯಿಸಿದ ಪರಿಣಾಮ ನಮ್ಮ ಮಗ ಬಲಿಯಾಗಿದ್ದಾನೆ ಎಂದು ಮೃತರ ತಾಯಿ ಕಣ್ಣೀರಿಟ್ಟರು.

      ಹುಳಿಯಾರು ದೊಡ್ಡ ಹೋಬಳಿ ಕೇಂದ್ರವಾಗಿದ್ದರೂ ಹುಳಿಯಾರಿನಲ್ಲಿ ಆಧಾರ್ ಕೇಂದ್ರ ತೆರೆಯದೆ ಯಳನಾಡು ಎಂದ ಹಳ್ಳಿಗೆ ಆಧಾರ್ ಕೇಂದ್ರ ಕೊಟ್ಟಿದ್ದಾರೆ. ಈ ಕೇಂದ್ರದಲ್ಲಿ ಸಿಬ್ಬಂದಿಯ ಸಮಸ್ಯೆಯ ಜೊತೆ ಸರ್ವರ್ ಸಮಸ್ಯೆಯಿದೆ. ಪರಿಣಾಮ ನಿತ್ಯ ಬರುವ ಐನೂರಕ್ಕೂ ಹೆಚ್ಚು ಮಂದಿಯಲ್ಲಿ ಹತ್ತಿಪ್ಪತ್ತು ಮಂದಿಯ ಆಧಾರ್ ಕೆಲಸವಾಗುತ್ತಿದೆ. ಉಳಿದರು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಜನರು ಸಮಸ್ಯೆ ವಿವರಿಸಿದರು.

       ಗ್ರಾಮ ಪಂಚಾಯ್ತಿಯ ಬಾಪೂಜಿ ಸೇವಾ ಕೇಂದ್ರದಲ್ಲಿ ಆಧಾರ್ ಸೇರಿದಂತೆ ಕಂದಾಯ ಇಲಾಖೆಯ ಅನೇಕ ಸೇವೆ ದೊರೆಯುತ್ತದೆ ನ್ನುತ್ತಾರಾದರೂ ತಾಲೂಕಿನ ಯಾವ ಪಂಚಾಯ್ತಿಯಲ್ಲೂ ಈ ಸೇವೆಗಳನ್ನು ಮಾಡುತ್ತಿಲ್ಲ. ನಾಡಕಛೇರಿಗಳಲ್ಲಿ ಆಧಾರ್ ಕೇಂದ್ರ ತೆರೆಯಲು ಅವಕಾಶವಿದ್ದರೂ ಇನ್ನೂ ತೆರೆದಿಲ್ಲ.

     ಪರಿಣಾಮ ಹೋಬಳಿ ಜನ ಆಧಾರ್ ತಿದ್ದು ಪಡಿಗೆ ಪರದಾಡುತ್ತಿದ್ದಾರೆ. ತಕ್ಷಣ ಹುಳಿಯಾರು ನಾಡಕಛೇರಿ ಸೇರಿದಂತೆ ಪಂಚಾಯ್ತಿಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಒತ್ತಡ ಹಾಕಿದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ಮಾತನಾಡಿ ಗ್ರಾಮ ಪಂಚಾಯ್ತಿಯ ಬಾಪೂಜಿ ಸೇವಾ ಕೇಂದ್ರ ಸಮರ್ಪಕವಾಗಿ ಸೇವೆ ಕೊಡುತ್ತಿದ್ದರೆ ತಾಲೂಕಿನಲ್ಲಿ ಆಧಾರ್ ತಿದ್ದುಪಡಿ ಸಮಸ್ಯೆಯಾಗಿ ಪರಿಣಮಿಸುತ್ತಿರಲಿಲ್ಲ.

      ಈಗಾಗಲೇ ಇಓ ಅವರಿಗೆ ತಕ್ಷಣದಿಂದ ಬಾಪೂಜಿ ಕೇಂದ್ರದ ಸಮಸ್ಯೆ ಪರಿಹರಿಸಿ ಸೇವೆ ಆರಂಭಿಸುವಂತೆ ಸೂಚನೆ ಕೊಟ್ಟಿದ್ದೇನೆ. ಇನ್ನು ನಾಡಕಛೇರಿಯಲ್ಲಿ ಜಾತಿಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಾಣಿ ಹೀಗೆ ಅನೇಕ ಕೆಲಸಕ್ಕೆ ಜನರು ಆಗಮಿಸುತ್ತಿದ್ದು ಇರುವ ಸಿಬ್ಬಂಧಿಯಿಂದ ಆಧರ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗಾಗಲೇ ಪ್ರತ್ಯೇಕ ಆಧಾರ್ ಕೇಂದ್ರ ತೆರೆಯಲು ಆಧಾರ್ ಕೇಂದ್ರದ ಯುನಿಟ್ ಹಾಗೂ ಸಿಬ್ಬಂಧಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

        ಈ ಸಂದರ್ಬದಲ್ಲಿ ಸಾಮಾಜಿಕ ಹೋರಾಟಗಾರ ಇಮ್ರಾಜ್ ಅವರು ಮಾತನಾಡಿ ನಾಡಕಛೇರಿಯಲ್ಲಿ ಪ್ರತಿ ಶನಿವಾರ ಆಧಾರ್ ತಿದ್ದುಪಡಿಗೆ ತಾವು ಸೂಚಿಸಿದ್ದಿರಿ. ಆದರೆ ಒಮದು ದಿನ ಮಾತ್ರ ಈ ಸೇವೆ ನೀಡಿ ಈಗ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಕಂದಾಯ ತನಿಖಾಧಿಕಾರಿ ಮಂಜುನಾಥ್ ಅವರು ಐ ಸ್ಕಾನರ್ ಕೆಟ್ಟೋಗಿರುವುದರಿಂದ ನಿಲ್ಲಿಸಲಾಗಿದ್ದು ಹೊಸ ಸ್ಕಾನರ್ ಬಂದ ತಕ್ಷಣ ಪುನಃ ಆರಂಭಿಸುವುದಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link