ಚಿತ್ರದುರ್ಗ:
ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಮಾತ್ರ ಇಡೀ ನಗರವನ್ನು ಸುಂದರವಾಗಿಟ್ಟುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ಪ್ರಿಯಾ ಕರೆ ನೀಡಿದರು.ಜಿಲ್ಲಾಡಳಿತ, ನಗರಸಭೆ ವತಿಯಿಂದ ಜೆ.ಸಿ.ಆರ್.ಸರ್ಕಲ್ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಮ್ಮ ಚಿತ್ತ ಸ್ವಚ್ಚತೆಯತ್ತ ಆಯ್ದ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯ ಕಸವನ್ನು ಹೊರಗೆ ತಂದು ಹಾಕುವುದರಿಂದ ಪರಿಸರ ಹಾಳಾಗುತ್ತದೆ. ಆರೋಗ್ಯಕ್ಕೆ ಹಾನಿಕಾರವಾಗಿರುವ ಪ್ಲಾಸ್ಟಿಕ್ ನಿಷೇಧಿಸಬೇಕಾಗಿದೆ. ಅದಕ್ಕಾಗಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ಗಳನ್ನು ಎಸೆಯುವುದು ಸರಿಯಲ್ಲ. ಸ್ವಚ್ಚತೆ ಕೇವಲ ಸರ್ಕಾರ, ನಗರಸಭೆಯ ಕೆಲಸ ಎಂದು ತಿಳಿದುಕೊಳ್ಳುವುದರ ಬದಲು ಪ್ರತಿಯೊಬ್ಬ ಪ್ರಜೆಯು ಸ್ವಚ್ಚತೆಗೆ ಮುಂದಾಗುವಂತೆ ಜನತೆಯಲ್ಲಿ ಮನವಿ ಮಾಡಿದರು.
ಮನೆಯಲ್ಲಿಯೇ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ನಗರಸಭೆಯಿಂದ ಬರುವ ವಾಹನಗಳಿಗೆ ಹಾಕಬೇಕು ಇದರಿಂದ ಕಸ ಸಂಗ್ರಹಣೆ ಸುಲಭವಾಗಲಿದೆ ಎಂದರು.
ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ ಮಾತನಾಡಿ ಸ್ವಚ್ಚತೆ ಎನ್ನುವುದು ಒಂದು ದಿನದ ಕೆಲಸವಲ್ಲ. ನಿತ್ಯ ನಿರಂತರವಾಗಿರಬೇಕು. ಬಯಲುಮುಕ್ತ ಶೌಚವನ್ನಾಗಿಸಬೇಕಾದರೆ ಪ್ರತಿಯೊಬ್ಬರು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಪ್ರತಿದಿನವೂ ಬೆಳಗಿನ ಜಾವ ನಗರಸಭೆಯ ವಾಹನ ಎಲ್ಲಾ ಮನೆಗಳ ಮುಂದೆ ಹೋಗಿ ಕಸವನ್ನು ಸಂಗ್ರಹಿಸುತ್ತದೆ. ಆದರೂ ಕೆಲವು ಕಡೆ ಮನೆಯ ಕಸ ತಂದು ಬೀದಿಗೆ ಸುರಿಯುತ್ತಿರುವುದು ಇನ್ನು ನಿಂತಿಲ್ಲ. ಬಳಸಿದ ಪ್ಲಾಸ್ಟಿಕ್ ಕವರ್ಗಳನ್ನು ಬೀದಿಗೆ ಎಸೆಯಬೇಡಿ. ಸಂಘ ಸಂಸ್ಥೆ, ನಗರಸಭೆ, ಸಾರ್ವಜನಿಕರಿಂದ ಮಾತ್ರ ಸ್ವಚ್ಚತೆ ಸಾಧ್ಯವಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಿ ಪ್ರತಿ ಪ್ರಜೆಯೂ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಕೋರಿದರು.
ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಸರಳ, ಭಾರತಿ, ಕಾಂತರಾಜ್, ಪೌರ ಕಾರ್ಮಿಕರು, ಯೋಜನಾ ನಿರ್ದೇಶಕರು, ಸಮುದಾಯ ಸಂಘಟನಾಧಿಕಾರಿ ಮಂಜುಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಸ್ವಚ್ಚತೆಯಲ್ಲಿ ಭಾಗವಹಿಸಿದ್ದರು.ಚಿಂದಿ ಆರಿಸುವ ಕೆಲವರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಟಾರ್ಗೆಟ್ ಟೆನ್ ಥೌಸೆಂಡ್ನವರು ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಿಡ ನೆಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
