ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾಧಿಕರಿಗಳಿಗೆ ಪತ್ರ
ಹುಳಿಯಾರು:
ರಾಜ್ಯದ ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆಯನ್ನು 2020 ರ ಮೇ ಮಾಹೆಯಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದ್ದು ಈ ಸಂಬಂಧ ಪೂರ್ವ ಸಿದ್ಧತೆಗೆ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ರಾಜ್ಯದ ಗ್ರಾಮ ಪಂಚಾಯ್ತಿಗಳು ಸಾರ್ವತ್ರಿಕ ಚುನಾವಣೆಯನ್ನು 2015 ರ ಮೇ-ಜೂನ್ ಮಾಹೆಯಲ್ಲಿ ನಡೆಸಲಾಗಿತ್ತು. ಸದರಿ ಪಮಚಾಯ್ತಿಗಳ ಅವಧಿಯು 2020 ರ ಜೂನ್-ಜುಲೈ ಮಾಹೆಯಲ್ಲಿ ಮುಕ್ತಾಯಗೊಳ್ಳುವುದರಿಂದ 2020 ರ ಮೇ ನಲ್ಲಿ ಮುಂದಿನ 5 ವರ್ಷಕ್ಕೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲಿದೆ.
ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2015 ರಲ್ಲಿ ಪ್ರಕರಣ 5 ರ ಉಪ ಪ್ರಕರಣ (4) ಕ್ಕೆ ಮೀಸಲಿರಿಸಿದ ಸ್ಥಾನಗಳು 10 ವರ್ಷಗಳ ಅವಧಿಗೆ ಮುಂದುವರೆಯ ತಕ್ಕದ್ದಾಗಿರುತ್ತದೆ ಎಂದು ತಿದ್ದುಪಡಿ ಮಾಡಲಾಗಿದೆ. ಹಾಗಾಗಿ 2011 ರ ಜನಗಣತಿಯಂತೆ ಗ್ರಾಮ ಪಂಚಾಯ್ತಿಗಳ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ ಕಳೆದ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗಿರುವುದರಿಂದ ಗ್ರಾಪಂ ಒಟ್ಟು ಸದಸ್ಯ ಸ್ಥಾನಗಳು ಮತ್ತು ಪ್ರಾದೇಶಿಕ ಕ್ಷೇತ್ರಗಳು ಹಾಗೂ ಕ್ಷೇತ್ರವಾರು ನಿಗದಿ ಪಡಿಸಿದರುವ ಮೀಸಲು ಸ್ಥಾನಗಳು ಬದಲಾವಣೆಯಾಗುವುದಿಲ್ಲ.
ಆದರೆ ಕೆಲ ಕಾರಣಗಳಿಂದಾಗಿ ಯಾವುದೇ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಹಾಗೂ ಜನಸಂಖ್ಯೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳನ್ನು ಪುನರ್ ನಿಗದಿಪಡಿಸುವುದು ಅನಿವಾರ್ಯವಾಗಿರುತ್ತದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿನ ಪಂಚಾಯ್ತಿಗಳಿಗೆ 2011 ರ ಜನಗಣತಿಯಂತೆ ಹೊಸದಾಗಿ ಸ್ಥಾನಗಳನ್ನು ನಿಗದಿಪಡಿಸಿ ಚುನಾವಣೆ ನಡೆಸುವುದು ಸೂಕ್ತವೆಂದು ಎಂದು ರಾಜ್ಯ ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.
ಈ ನಿಟ್ಟಿನಲ್ಲಿ ಯಾವುದೇ ಕಾರಣಗಳಿಂದ ವರ್ಗವಾರು ಸ್ಥಾನಗಳನ್ನು ಪುನರ್ ನಿಗದಿಪಡಿಸಬೇಕಾದ ಗ್ರಾಮ ಪಂಚಾಯಿತಿಗಳ ವಿವರ ಹಾಗೂ ಯಾವುದೇ ವ್ಯತ್ಯಾಸವಿಲ್ಲದ ಗ್ರಾಪಂ ವಿವರದ ಬಗ್ಗೆ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ರಾಜ್ಯ ಚುನಾವನಾ ಆಯೋಗಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವನಾ ಆಯೋಗದ ಅಧೀನ ಕಾರ್ಯದರ್ಶಿ ಗಳು ಪತ್ರ ಬರೆದಿದ್ದಾರೆ.ಒಟ್ಟಾರೆ ರಾಜ್ಯ ಚುನಾವಣಾ ಪತ್ರದ ಪ್ರಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ 2020 ರ ಮೇ ಮಾಹೆಯಲ್ಲಿ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
