ತೆಲಂಗಾಣ : ಬಿಆರ್‌ಎಸ್‌ಗೆ ತೀವ್ರ ಹಿನ್ನಡೆ

ನವದೆಹಲಿ: 

    ತೆಲಂಗಾಣದ ಪ್ರತಿಪಕ್ಷ ಬಿಆರ್‌ಎಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ಪೆದ್ದಪಲ್ಲೆ(ಎಸ್‌ಸಿ) ಸಂಸದ ಬಿ ವೆಂಕಟೇಶ್ ನೇತಾ ಅವರು ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

    ವೆಂಕಟೇಶ್ ನೇತಾ ಅವರು ಇಂದು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ ಸಿ ವೇಣುಗೋಪಾಲ್, ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು ಎಂದು ಪಕ್ಷದ ಮೂಲಗಳು ತಿಳಿಸಿವೆ.

    ನೇತಾ ಅವರು ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ಸೇರ್ಪಡೆಯಾದ ನಂತರ ರೇವಂತ್ ರೆಡ್ಡಿ ಮತ್ತು ಇತರ ಮುಖಂಡರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಮೊದಲ ಬಾರಿಗೆ ಸಂಸದರಾಗಿರುವ ವೆಂಕಟೇಶ್ ನೇತಾ ಅವರು 2018 ರಲ್ಲಿ ರಾಜಕೀಯಕ್ಕೆ ಧುಮುಕುವ ಮೊದಲು ರಾಜ್ಯ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

    ಅವರು 2018 ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅವರು BRS ಸೇರಿ  2019 ರಲ್ಲಿ ಪೆದ್ದಪಲ್ಲಿ(SC) ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ