ನವದೆಹಲಿ:
ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರ ಕೊಂಚ ಅಬಕಾರಿ ಸುಂಕ ಕಡಿತಗೊಳಿಸಿದೆ. ಇದರಿಂದ ವಾಹನ ಸವಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಮುಂದಾದರೂ ಗಗನಕ್ಕೇರುತ್ತಿರುವ ಇಂಧನ ಬೆಲೆಗೆ ಕಡಿವಾಣ ಬೀಳುವುದೇ ಎಂಬ ಕಾತರ ಜನ ಸಮುದಾಯದಲ್ಲಿ ಉಂಟಾಗಿದೆ.
ಕೇಂದ್ರ ಸರ್ಕಾರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂ. ಕಡಿತ ಮಾಡಿದೆ.
ಸರ್ಕಾರ ಹೀಗೆ ದರ ಇಳಿಕೆ ಮಾಡಿರುವುದರ ಹಿಂದೆ ಮೊನ್ನೆಯ ಚುನಾವಣಾ ಫಲಿತಾಂಶ ಕಾರಣ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ಲೋಕಸಭೆ, ವಿಧಾನಸಭೆ ಹಾಗೂ ಇತರೆ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಿತ್ತು. ಬಹಳಷ್ಟು ಕಡೆಗಳಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ದವಾಗಿ ಫಲಿತಾಂಶ ಹೊರಬಿದ್ದಿದೆ.
ಸತತವಾಗಿ ಬೆಲೆ ಏರಿಕೆ ಹಾಗೂ ಇಂಧನ ಬೆಲೆ ಏರಿಕೆಯಿಂದ ಜನ ಆಕ್ರೋಶಗೊಂಡಿದ್ದು ಈ ಆಕ್ರೋಶ ಚುನಾವಣೆಯ ಮೇಲೆ ಬಂದೆರಗಿದೆ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿದ್ದು ಇದರಿಂದ ಪಾರಾಗಲು ಒಂದೇ ದಿನಕ್ಕೆ ಇಂಧನ ಬೆಲೆಯಲ್ಲಿ ಕೊಂಚ ಸುಂಕ ಕಡಿತಗೊಳಿಸುವ ಮೂಲಕ ಜನ ಸಾಮಾನ್ಯರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಆದರೆ ಈಗ ಇಳಿಕೆ ಮಾಡಿರುವ ಸುಂಕ ಕೇವಲ ಕಣ್ಣೊರೆಸುವ ತಂತ್ರ ಅಷ್ಟೇ, ಇನ್ನೂ ಹೆಚ್ಚಿನ ಸುಂಕ ಇಳಿಕೆ ಮಾಡಬಹುದಿತ್ತು ಏಕೆ ಮಾಡಲಾಗಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ನಿರ್ಧಾರವಾಗುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ದೇಶದ ಕೆಲವು ನಗರಗಳಲ್ಲಿ ಲೀಟರ್ ಪೆತ್ರೋಲ್ ದರ 115 ರೂ.ಗಳಷ್ಷಿದೆ. ಇನ್ನು ಕೆಲವು ರಾಜ್ಯಗಳಲ್ಲಿ 110 ರೊ.ಗಳಷ್ಟಿದೆ. ಈಗ ಸುಂಕ ಇಳಿಸಿದ್ದರೂ 100 ರೂ,ಗಳ ಮೇಲೆಯೇ ಇರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನಸ್ಸು ಮಾಡಿ ಅಬಕಾರಿ ಸುಂಕ ಇಳಿತ ಮಾಡಿದರೆ ಜನ ಸಾಮಾನ್ಯರು ಕೊಂಚ ಆತಂಕದಿಂದ ಹೊರ ಬರಬಹುದು ಎನ್ನುತ್ತಾರೆ ವಿಶ್ಲೇಷಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
