ಬೆಂಗಳೂರು
ಮಡಿವಾಳದ ಬಾಲಾಪರಾಧಿಗಳ ಮಂದಿರದಲ್ಲಿ ಇರಿಸಲಾಗಿದ್ದ ಬಾಲಾಪರಾಧಿಗಳು 15 ಮಂದಿ ಶುಕ್ರವಾರ ಬೆಳಿಗ್ಗೆ ಉಪಹಾರಕ್ಕೆ ಬಿಟ್ಟ ವೇಳೆ ಸಂಚು ರೂಪಿಸಿ ಕಾವಲಿಗಿದ್ದ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು ಅವರಲ್ಲಿ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಐವರು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಹೋಂಗಾರ್ಡ್ ರಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಾಪರಾಧಿಗಳ ಮಂದಿರದಲ್ಲಿ ಬೆಳಿಗ್ಗೆ 9 ರವೇಳೆ ಉಪಹಾರಕ್ಕೆ ಆವರಣಕ್ಕೆ ಬಾಲಕರನ್ನು ಬಿಡಲಾಯಿತು ಈ ವೇಳೆ ಸುಮಾರು 15 ಮಂದಿ ಬಾಲಾಪರಾಧಿಗಳು ಪರಾರಿಯಾಗಲು ಸಂಚು ರೂಪಿಸಿ ಕಾವಲಿಗಿದ್ದ ರಮೇಶ್ ಅವರಿಗೆ ಹಿಂದಿನಿಂದ ಗಟ್ಟಿಯಾಗಿ ಕೂಗದಂತೆ ಭದ್ರವಾಗಿಟ್ಟುಕೊಂಡು ಕಬ್ಬಿಣದ ಸಲಾಕೆಯಿಂದ ಹೊಡೆದು ಬೆದರಿಸಿ ಪರಾರಿಯಾಗುತ್ತಿದ್ದಾಗ ಅವರಲ್ಲಿ ಸುಮಾರು 9 ಮಂದಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಉಳಿದ 5 ಮಂದಿ ಬಾಲಕರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳಕ್ಕೆ ಮಡಿವಾಳ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪರಾರಿಯಾಗಿರುವ ಬಾಲಾಪರಾಧಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಈ ಹಿಂದೆಯೂ ಹಲವು ಬಾರಿ ಸಾಕಷ್ಟು ಬಾಲಾಪರಾಧಿಗಳು ಈ ಮಂದಿರದಿಂದ ಪರಾರಿಯಾಗಿದ್ದು ಮಡಿವಾಳ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಾಲಾಪರಾಧಿ ಮಂದಿರದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
