ದಾವಣಗೆರೆ :
ಲೋಕಸಭಾ ಚುನಾವಣೆಯಲ್ಲಿ ವಿಕಲಚೇತನರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಅರಿವು ಮೂಡಿಸಲು ಶನಿವಾರ ವಾಕ್ ಮತ್ತು ಶ್ರವಣದೋಷವುಳ್ಳ ವಿಕಲಚೇತನರು ವಿಶಲ್ ಊದುವುದರ ಮೂಲಕ ಜಾಗೃತಿ ಜಾಥಾ ನಡೆಸಿದರು.ನಗರದ ಜಯದೇವ ವೃತ್ತದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಅವರಿಂದ ಚಾಲನೆ ಪಡೆದ ಜಾಥಾವು ಗಾಂಧಿ ಸರ್ಕಲ್, ಮಹಾನಗರಪಾಲಿಕೆ, ಎ.ವಿ.ಕೆ.ಕಾಲೇಜ್ ರಸ್ತೆ, ವಿದ್ಯಾರ್ಥಿ ಭವನ, ಮೋತಿವೀರಪ್ಪ ಕಾಲೇಜು ಆವರಣ ತಲುಪಿ ಮುಕ್ತಾಯವಾಯಿತು.
ಜಾಥಾದಲ್ಲಿ ದಾವಣಗೆರೆ ಜಿಲ್ಲಾ ಕಿವುಡರ ಸಂಘ ಹಾಗೂ ವಿಕಲಚೆತನ ಹೆಣ್ಣು ಮಕ್ಕಳಿಗಾಗಿ ಇರುವ ಸಿ.ಕೇಶವಮೂರ್ತಿ ವೃತ್ತಿ ತರಬೇತಿ ಕೇಂದ್ರ ಸೇರಿದಂತೆ ವಿವಿಧ ವಿಕಲಚೆತನರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಜಾಥಾದಲ್ಲಿ ಭಾಗವಹಿಸಿದ್ದ ವಿಕಲಚೇತನರು ತಲೆಗೆ ಬಿಳಿ ಟೊಪ್ಪಿಗೆ ಧರಿಸಿ, ಕೊಳ್ಳಿಗೆ ವಿಶಲ್ ನೇತು ಹಾಕಿಕೊಂಡು ವಿಶೇಷ ಗಮನ ಸೆಳೆಯುವುದರ ಜೊತೆಗೆ ಜಾಥಾದ ಉದ್ದಕ್ಕೂ ಪಿಪಿ ಊದುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ್, ಕಿವುಡ ಸಂಘದ ಅಧ್ಯಕ್ಷ ಗಿರೀಶ್, ಶೃತಿ, ಮಾರುತಿ, ಮೌನೇಶ್ವರಿ, ಇಟಗಿ, ದುಗ್ಗೇಶ್, ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/23_dvg_06.gif)