ತಿಪಟೂರು
ನಾವಿಂದು ಕುವೆಂಪುರವರ ಆಶಯದಂತೆ ಮನುಜ ಮತ, ವಿಶ್ವ ಪಥದಿಂದ ವಿಶ್ವಮಾನವರಾಗೋಣವೆಂದು ಉಪನ್ಯಾಸಕರಾದ ರಂಗನಾಥ್ ಕರೆನೀಡಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಂದ ಏರ್ಪಡಿಸಿದ್ದ ವಿಶ್ವಮಾನವ ಕುವೆಂಪುರವರ ಜನ್ಮದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು ಹಲವಾರು ಮಹನೀಯರ ಜಯಂತಿಗಳನ್ನು ಆಚರಿಸುತ್ತಿರುವ ಉದ್ದೇಶವೇನೆಂದರೆ ನಾವು ಪುಸ್ತಕಗಳನ್ನು ಓದುತ್ತಿಲ್ಲ.
ಜೊತೆಗೆ ಸಾಮಾಜಿಕ ಜಾಲತಾಣ, ಮೊಬೈಲ್ಗಳಲ್ಲೇ ಕಳೆದು ಹೋಗುತ್ತಿದ್ದೇವೆ. ಆದ್ದರಿಂದ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವ ಸಂದರ್ಭದಲ್ಲಿ ಅವರ ಮಾತುಗಳನ್ನು ಕೇಳಿ ಎಂದ ಅವರು, ಕುವೆಂಪುರವರ ಜೀವನವನ್ನು ತಿಳಿಸಿ ಅವರು ಪದವಿಯನ್ನು ಓದುತ್ತಿರುವಾಗ ಐರಿಸ್ ದೇಶದ ಜಾನ್ಕಸಿನ್ ರವರಿಗೆ ತಮ್ಮ ಆಂಗ್ಲ ಕವಿತೆಗಳನ್ನು ತೋರಿಸಿದಾಗ ಅವರು ನಿನ್ನ ಮಾತೃಭಾಷೆಯಲ್ಲಿ ಕವಿತೆಗಳನ್ನು ಬರೆ, ಅದು ನಿನ್ನ ಹೃದಯವನ್ನು ತಟ್ಟಿ ಎಲ್ಲಾ ಕನ್ನಡಿಗರ ಮನಮುಟ್ಟುತ್ತದೆ ಎಂದು ಮಾರ್ಗದರ್ಶನ ಮಾಡಿದರು.
ಅದರಂತೆ ಅವು ವಿದ್ಯಾರ್ಥಿದೆಸೆಯಲ್ಲೇ ಅಮಲನ ಕಥೆ, ಕೊಳಲು ಮುಂತಾದ ಕವನ ಸಂಕಲಗಳನ್ನು ರಚಿಸಿ ತಮ್ಮ ಗುರುಗಳಾದ ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀಕಂಠಯ್ಯರವರಿಂದ ಪ್ರಶಂಸೆಗಳಿಸಿದರು. ಇವರ ರಾಮಾಯಣ ದರ್ಶನಂ ಕೃತಿಯಿಂದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಾಗ ಇವರನ್ನು ವಿ.ಕೃ.ಗೋಕಾಕ್ರವರು ಕುವೆಂಪುರವರನ್ನು ನೀನು ಪುಟ್ಟಪ್ಪನೇ ಸರಿ ಎಂದು ಅಣಕಿಸಿದರು. ಅದಕ್ಕೆ ಉತ್ತರಿಸಿದ ಅವರು ಗೋಕಾಕ್ರವರನ್ನು ನೀ ಗೋ ಕಾಕಾ ಎಂದಿದ್ದರು. ಆದರೆ ಇದನ್ನು ತಮ್ಮ ಮನಸ್ಸಿಗೆ ಹಚ್ಚಿಸಿಕೊಳ್ಳದೇ ವಿ.ಕೃ.ಗೋಕಾಕ್ರ ಭಾರತ ಸಿಂಧೂರಶ್ಮಿಗೆ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಿದರು. ‘ಬೆರಳಿಗೆ ಕೊರಳ್’ ಸಮಾಜ ಕೆಳವರ್ಗದವರನ್ನು ಕುರಿತು ಅವರ ಶೋಷಣೆಯನ್ನು ತಿಳಿಸಿದರು. ಅವರ ಒಂದೊಂದು ಕೃತಿಗಳು ಅಣಿಮುತ್ತುಗಳಿಗೆ ಸಮಾನವಾಗಿದ್ದವು ಅವರ ಕೃತಿಗಳನ್ನು ಓದಬೇಕೆಂದರು.
ತಾಲ್ಲೂಕು ದಂಡಾಧಿಕಾರಿ ಡಾ. ಮಂಜುನಾಥ್ ಮಾತನಾಡುತ್ತ ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇವರನ್ನು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ, ಬೇಂದ್ರೆಯವರಿಂದ ‘ಯುಗದಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದ ಅವರಿಗೆ ಕನ್ನಡದಲ್ಲಿ ಎರಡನೇಯ ರಾಷ್ಟ್ರಕವಿಯಾಗಿದ್ದ ಅವರು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲಬಾರಿಗೆ ಪಡೆದರು. ನಮ್ಮ ಸರ್ಕಾರದ ಕರ್ನಾಟಕ ರತ್ನ, ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದರು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
