ಹೂವಿನಹಡಗಲಿ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಎ.ಐ.ಟಿ.ಯು.ಸಿ. ಆಶಾ ಕಾರ್ಯಕರ್ತೆಯರ ಸಂಘಟನೆ, ಗ್ರಾ.ಪಂ. ನೌಕರರ ಸಂಘಟನೆ, ದೇವದಾಸಿ ಮಹಿಳೆಯರ ಸಂಘಟನೆ, ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರೀ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಐ.ಸಿ.ಡಿ.ಎಸ್. ಯೋಜನೆಯನ್ನು ಆಳುವ ಸರ್ಕಾರಗಳು ಬದಲಾವಣೆ ಮಾಡಲು ಹೊರಟಿವೆ ಎಂದು ಆರೋಪಿಸಿದ ಎ.ಐ.ಟಿ.ಯು.ಸಿ. ಸಂಘಟನೆಯ ಶಾಂತರಾಜ್ ಜೈನರವರು ಗರ್ಭಿಣಿ, ಬಾಣಂತಿಯರ, ಕಿಶೋರಿಯರ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಮತ್ತು ಶಾರೀರಿಕ ಶಕ್ತಿವಂತರನ್ನಾಗಿ ಉಪಯೋಗಿಸುವಂತಹ ಪೌಷ್ಠಿಕ ಆಹಾರ ಹಾಗೂ ಅಕ್ಷರ ಜ್ಞಾನವನ್ನು ಕಲಿಸುವಂತಹ ಅಂಗನವಾಡಿ ಕಾರ್ಯಕರ್ತೆಯರಿಗೆ ಅನೇಕ ತಮ್ಮ ಇಲಾಖಾ ಜವಾಬ್ದಾರಿಗಳಲ್ಲದೆ, ಬೇರೆ ಬೇರೆ ಕೆಲಸಗಳನ್ನು ವಹಿಸುವುದರ ಮೂಲಕ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅನೇಕ ಹುಸಿ ಭರವಸೆಗಳನ್ನು ನೀಡುವುದರ ಮೂಲಕ ಅಧಿಕಾರಕ್ಕೆ ಬಂದು ಕಾರ್ಮಿಕರ ಶ್ರಮದ ಬೆವರಿನ ಫಲ ನೀಡದೇ, ಅನೇಕ ಯೋಜನೆಗಳನ್ನು ಮೊಟಕುಗೊಳಿಸುವುದರ ಮೂಲಕ ಅನ್ಯಾಯ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ತಹಶೀಲ್ದಾರ ರಾಘವೇಂದ್ರರಾವ್ರವರಿಗೆ ಎಲ್ಲಾ ಸಂಘಟನೆಗಳು ಮನವಿ ಪತ್ರವನ್ನು ಸಲ್ಲಿಸಿದರು.
ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳ, ಕಮಲಾಕ್ಷಿ, ಬಿ.ಜಯಲಕ್ಷ್ಮಿ, ಆಶಾ ಕಾರ್ಯಕರ್ತೆಯರ ಸಂಘಟನೆಯ ಚನ್ನಮ್ಮ, ಅಂಗವಿಕಲರ ಪಾಲಕರ ಒಕ್ಕೂಟದ ಅಧ್ಯಕ್ಷ ಜೆ.ನಿಂಗಪ್ಪ, ಆಟೋ ಚಾಲಕರ ಸಂಘಟನೆಯ ಶಂಶುದ್ದೀನ್, ಗ್ರಾ.ಪಂ.ನೌಕರರ ಒಕ್ಕೂಟದ ಅಧ್ಯಕ್ಷ ಎಸ್.ನಾಗಭೂಷಣರೆಡ್ಡಿ, ಹಾಗೂ ಕೇಶಪ್ಪ, ಕೋಟೆಪ್ಪ, ಡಿಳ್ಳೆಪ್ಪ, ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಮಹಮ್ಮದ್ ಗೌಸ್, ಮತ್ತು ಕೆ.ನಾಗರಾಜ, ಸೇರಿದಂತೆ ಹಲವರು ಇದ್ದರು. ಆರಂಭದಲ್ಲಿ ಪತ್ರಕರ್ತರ ಹಾಗೂ ಮಾಜಿ ಶಾಸಕರ ಸಹಾಯಕ ಹೆಚ್.ಚಂದ್ರಪ್ಪ ಕ್ರಾಂತಿಗೀತೆಗಳನ್ನು ಹಾಡಿದರು.