ಬ್ಯಾಡಗಿ:
ದೇಶಕ್ಕೆ ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದ್ದು, ಪ್ರಸಕ್ತ ಲೋಕಸಭಾ ಚುನಾವಣೆ ದೇಶಭಕ್ತರ ಮತ್ತು ದೇಶಭ್ರಷ್ಟರ ನಡುವಿನ ಮಹಾಯುದ್ಧವಾಗಿದೆ, ಆಂತರಿಕವಾಗಿ ಹಾಗೂ ಬಾಹ್ಯವಾಗಿ ಹೆಚ್ಚುತ್ತಿರುವ ದೇಶ ವಿರೋಧಿಗಳನ್ನು ಹತ್ತಿಕ್ಕುವ ಮೂಲಕ ದೇಶದ ಜನರ ಸಮಗ್ರ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಣ ತೊಡುವಂತೆ ರಾಜಸ್ಥಾನದ ಮಾಜಿ ಸಚಿವೆ ಕಿರಣ ಮಹೇಶ್ವರಿ ಕರೆ ನೀಡಿದರು.
ಮೋಟೆಬೆನ್ನೂರಿನ ಬಿಆರ್ಇ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶಕ್ತಿ ಹಾಗೂ ಮಹಾಶಕ್ತಿ ಕೇಂದ್ರಗಳ ಬೂತಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ತನ್ನದೇ ಆದ ಸಿದ್ಧಾಂತವನ್ನು ಹೊಂದಿದೆ, ದೇಶಭಕ್ತಿ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಅಧಿಕಾರವಿರಲಿ ಬಿಡಲಿ ‘ಭಾರತ ಮಾತಾ ಕೀ ಜೈ ಹಾಗೂ ವಂದೇ ಮಾತರಂ’ ಘೋಷವಾಕ್ಯಗಳಿಗೆ ಬಿಜೆಪಿ ಭದ್ಧವಾಗಿ ನಡೆದುಕೊಳ್ಳಲಿದೆ ಎಂದರು.
ಕಳೆದಾರು ದಶಕಗಳ ಕಾಲ ಸಾವಿರಾರು ಕೋಟಿ ಹಗರಣಗಳನ್ನು ನಡೆಸಿ ದೇಶವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದ ಕಾಂಗ್ರೆಸ್ನವರಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಕಳೆದ 58 ತಿಂಗಳಲ್ಲಿ ದೇಶವನ್ನು ವಿಶ್ವದಲ್ಲಿಯೇ ನಾಲ್ಕನೇ ತಂದು ನಿಲ್ಲಿಸಿದ ಕೀರ್ತಿ ಸನ್ಮಾನ್ಯ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಸಲ್ಲುತ್ತದೆ, ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ ಎಂದು ಅಪ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ವಾಸ್ತವವನ್ನು ಮರೆ ಮಾಚುವ ಯತ್ನ ಮಾಡುತ್ತಿದೆ ಎಂದರು.
ಮಹಾಘಟಬಂದನ ಲೂಟಿಕೋರರ ಗುಂಪು: ಪ್ರಧಾನಿಯಾಗಲು ಹವಣಿಸುತ್ತಿರುವ 20 ಹೆಚ್ಚು ಲೂಟಿಕೋರ ಪಕ್ಷಗಳು ದೇಶದಲ್ಲಿ ಮಹಾಘಟಬಂಧನ್ ರಚಿಸಿಕೊಂಡಿದ್ದು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣೆಸುತ್ತಿವೆ, ಅದರಲ್ಲಿ ರಾಜ್ಯದಲ್ಲಿರುವ ಜೆಡಿಎಸ್ ಕೂಡ ಒಂದಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಭಾರತೀಯರ ಜವಾಬ್ದಾರಿಯಾಗಬೇಕು ಎಂದರು.
ನರೇಂದ್ರ ಮೋದಿ ತಡೆಯಲು ಸಾಧ್ಯವಿಲ್ಲ: ದೇಶಸೇವೆಯ ಗುರಿಯೊಂದಿಗೆ ಕಳೆದ 5 ವರ್ಷಗಳ ಕಾಲ ಭ್ರಷ್ಟರಹಿತ ಅಧಿಕಾರ ನಡೆಸಿದ ನರೇಂದ್ರ ಮೋದಿ ನಿಸ್ವಾರ್ಥ ಸೇವೆಯಲ್ಲಿ ತೊಡಗುತ್ತಿರುವ ನಾಯಕನನ್ನು ದೇಶ ಮತ್ತೊಮ್ಮೆ ಪ್ರಧಾನಿ ಮಾಡಲು ನಿರ್ಧರಿಸಿದೆ, ಪ್ರಧಾನಿಯಾಗುವುದನ್ನು ತಡೆಯಲು ಯಾವುದೇ ಶಕ್ತಿಗಳಿಂದ ಸಾಧ್ಯವಿಲ್ಲ, ಬಿಜೆಪಿಯ ಮುಖಂಡ ಪ್ರಮುಖವಾಗಿ ಭಾರತ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿದೆ ಎಂದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಆರು ದಶಕಗಳಿಗೂ ಹೆಚ್ಚು ಕಾಂಗ್ರೆಸ್ ದೇಶವನ್ನಾಳುವ ಮೂಲಕ ದೇಶದ ಸ್ಥಿತಿಗತಿ ಅಧೋಗತಿಗೆ ತಂದಿತ್ತು, ನರೇಂದ್ರ ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಭಾರತ ಗಣನೀಯ ಅಭಿವೃದ್ಧಿ ಕಂಡಿದೆ. ಕೊಟ್ಟ ಭರವಸೆಯನ್ನು ಬಿಜೆಪಿ 5 ವರ್ಷದಲ್ಲಿ ಪೂರೈಸಿದೆ, ಬಿಜೆಪಿ ಜಾರಿಗೊಳಿಸಿದ ಯೋಜನೆಗಳು ಮನೆಮನೆಗೂ ತಲುಪಿವೆ ಕಾರ್ಯಕರ್ತರ ಪಡೆ ಪ್ರತಿಯೊಂದು ಮನೆಮನೆಗೂ ತೆರಳಿ ಕರಪತ್ರ ಅಭಿಯಾನ ಹಮ್ಮಿಕೊಂಡಿದ್ದು, ಬಿಜೆಪಿಯ ಸಾಧನೆ, ಪ್ರಣಾಳಿಕೆ ನೀಡುವ ಮೂಲಕ ಮತ ಕೇಳಬೇಕೆಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಶಾಸಕ ಸಿ.ಎಂ.ಉದಾಸಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಭಾರತಿ ಮಲ್ಲಿಕಾರ್ಜುನ, ಸಿದ್ಧರಾಜ ಕಲಕೋಟಿ, ಮುರಿಗೆಪ್ಪ ಶೆಟ್ಟರ, ಶಂಕ್ರಣ್ಣ ಮಾತನವರ, ವೀರಯ್ಯ ಹಿರೇಮಠ, ಭಾರತಿ ಮುಗದುಮ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.