ಹೊಳಲ್ಕೆರೆ
ರಾಮಗಿರಿ ಶ್ರೀ ಕರಿಸಿದ್ದೇಶ್ವರಸ್ವಾಮಿ ದೇವಾಲಯದ ಮೇಲೆ 10 ಲಕ್ಷ ವೆಚ್ಚದಲ್ಲಿ ತಗಡಿನ ಹೊದಿಕೆ ನಿರ್ಮಿಸಲಾಗುತ್ತಿದೆ ಎಂದು ದೇವಾಲಯ ಸಮಿತಿಯ ಮುಖ್ಯಸ್ಥ ರಾಮಗಿರಿ ರಾಮಣ್ಣ ತಿಳಿಸಿದರು.
ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಕರಿಸಿದ್ದೇಶ್ವಸ್ವಾಮಿ ದೇವಾಲಯದ ಮೇಲೆ ತಗಡಿನ ಹೊದಿಕೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಬೆಟ್ಟದ ಮೇಲಿರುವ ಸ್ವಾಮಿಯ ದೇವಾಲಯ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅಲ್ಲದೆ ದೇವಾಲಯವು ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ದೇವಾಲಯದ ಮೇಲ್ಚಾವಣಿ ಮಳೆಗಾಲದಲ್ಲಿ ಸೋರಲಾರಂಬಿಸಿತ್ತು. ಈಗಾಗಲೇ ನಾಲ್ಕೈದು ಬಾರಿ ಮೇಲ್ಚಾವಣಿಗೆ ಚುರಿಕಿ ಹಾಕಿ ಸೋರುವುದನ್ನು ತಪ್ಪಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಚುರಿಕೆ ಹಾಕುತಿದ್ದರಿಂದ ಮೇಲ್ಚಾವಣಿ ಹೆಚ್ಚಿನ ಭಾರ ಹೊಂದಿ ಕುಸಿತ ಕಾಣುವ ಸಂಭವವಿತ್ತು. ಗ್ರಾಮಸ್ಥರು, ಭಕ್ತರಲ್ಲಿ ದೇವಾಲಯದ ಶಿತಿಲಾವಸ್ಥೆ ಬಗ್ಗೆ ಆತಂಕ ಉಂಟಾಗಿತ್ತು. ಸಮಸ್ಯೆಯಿಂದ ಹೊರಬರಲು ತಗಡಿನ ಮೇಲ್ಚಾವಣಿಯ ಮೊರೆ ಹೋಗಬೇಕಾಗಿದೆ ಎಂದರು.
ಮಳೆಯ ರಕ್ಷಣೆಗೆ ಮೇಲ್ಚಾವಣಿ:
ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸತತ ಮಳೆಯಿಂದ ದೇವಾಲಯವನ್ನು ರಕ್ಷಿಸಲು ತಗಡಿನ ಮೇಲ್ಚಾವಣಿ ನಿರ್ಮಿಸಿರುತ್ತಾರೆ. ಅವುಗಳನ್ನ ಗಮನಿಸಿ ಈಗ ಶ್ರೀ ಕರಿಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಅದೇ ರೀತಿ ತಗಡಿನ ಮೇಲ್ಚಾವಣಿ ನಿರ್ಮಿಸಲು ಉದ್ದೇಶಿಸಿ, ಇಂಜಿನಿಯರ್ ಮೂಲಕ ಪ್ಲಾನ್ ಮಾಡಿಸಲಾಗಿತ್ತು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಇಂಜಿನಿಯರ್ ಪ್ಲಾನ್ ಮಾಡಿಕೊಟ್ಟಿದ್ದರು. ನಂತರ ಕೆಲ ಭಕ್ತರ ಸಹಕಾರದಿಂದ ಒಂದಿಷ್ಟು ಅಡ್ವಾನ್ಸ್ ಕೂಡ ನೀಡಲಾಗಿತ್ತು. ಇದರಿಂದಾಗಿ ಮೂರು ದಿನಗಳ ಹಿಂದೆ ಎಲ್ಲಾ ಮೆಟೀರಿಯಲ್ ಬಂದಿದ್ದು, ಅಧಿಕೃತವಾಗಿ ಇಂದು ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ಶ್ರಮಧಾನ ಮಾಡಿದ ವಿದ್ಯಾರ್ಥಿಗಳು:
ದೇವಾಲಯ ಬೆಟ್ಟದ ಮೇಲಿದ್ದು, ಅಲ್ಲಿಗೆ ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಇದರಿಂದಾಗಿ ಮೆಟೀರಿಯಲ್ ಗಳನ್ನು ಕೆಳಗಡೆಯಿಂದ ಮೆಟ್ಟಿಲುಗಳ ಮೂಲಕವೇ ಸಾಗಿಸಬೇಕಿತ್ತು. ವಿಷಯ ತಿಳಿದ ಶ್ರೀ ಕರಿಸಿದ್ದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಬಾಗೂರು ಗಂಗಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೆಳಗಡೆಯಿಂದ ಮೆಟ್ಟಿಲುಗಳ ಮೂಲಕ ಎಲ್ಲಾ ಸಾಮಗ್ರಿಗಳನ್ನು ಸಾಗಿಸಿ ಶ್ರಮಧಾನ ಮಾಡಿ ಮಾಡಿ ತಮ್ಮ ಭಕ್ತಿ ಸಮರ್ಪಿಸಿದ್ದಾರೆ. ಅವರಿಗೆ ಗ್ರಾಮಸ್ಥರು, ದೇವಾಲಯದ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದರು.ದೇವಾಲಯ ಸಮಿತಿಯ ಪೋಸ್ಟ್ ಓಂಕಾರಪ್ಪ, ಷಡಾಕ್ಷರಿ ದೇವಾ ಮತ್ತಿತರರಿದ್ದರು.
ಭಕ್ತರ ಸಹಕಾರ ಅಗತ್ಯ:
ವಾಲಯದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯಬೇಕಿದ್ದು. ಇದಕ್ಕೆ ಭಕ್ತರ ಸಹಕಾರ ಅಗತ್ಯವಿದೆ. ದೇವಾಲಯ ಮಳೆಗಾಲದಲ್ಲಿ ಸೋರುವುದನ್ನು ತಡೆಯಲು ಶಾಶ್ವತ ಪರಿಹಾರವಾಗಿ ತಗಡಿನ ಮೇಲೊದಿಕೆಯನ್ನು ನಿರ್ಮಿಸಲಾಗುತಿದ್ದು, ಇದಕ್ಕೆ 10 ಲಕ್ಷ ವೆಚ್ಚವಾಗಲಿದೆ. ದೇವಾಲಯದ ಅಭಿವೃದ್ದಿಗಾಗಿ ತಾಪಂ ಮಾಜಿ ಅಧ್ಯಕ್ಷೆ ದಿಲ್ಷಾದ್ ಬೇಗಂ 50 ಸಾವಿರ ದೇಣಿಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದೇ ರೀತಿ ಭಕ್ತರು ಸ್ವಯಂ ಪ್ರೇರಿತರಾಗಿ ಆರ್ಥಿಕ ಸಹಕಾರವನ್ನು ನೀಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
