ಬೆಂಗಳೂರು:
ಅನರ್ಹತೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕದ 15 ವಿಧಾನಸಭೆಗೆ ನಡೆಯಬೇಕಿದ್ದ ಉಪಚುನಾವಣೆ ದಿನಾಂಕವನ್ನು ತಡೆಹಿಡಿಯಲಾಗಿತ್ತು. ಇದೀಗ ಈ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಹೊಸ ದಿನಾಂಕವನ್ನು ನಿಗದಿ ಮಾಡಿ ಆಯೋಗ ಆದೇಶ ನೀಡಿದೆ.
ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗ ತಿಳಿಸಿದೆ. ನ.11 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೇ ದಿನವಾಗಿದೆ. ಒಟ್ಟಾರೆ ಡಿಸೆಂಬರ್ 11ರೊಳಗೆ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಕ್ತಾಯಗೊಳ್ಳುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಯಾವ ಕ್ಷೇತ್ರಗಳಿಗೆ ಉಪಚುನಾವಣೆ
ಅಥಣಿ,ಕಾಗವಾಡ,ಗೋಕಾಕ್,ಯಲ್ಲಾಪುರ,ಹಿರೇಕೆರೂರು,ರಾಣೆಬೆನ್ನೂರು,ವಿಜಯನಗರ ,ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್,ಶಿವಾಜಿನಗರ,ಹೊಸಕೋಟೆ,ಕೆ.ಆರ್.ಪೇಟೆ,ಹುಣಸೂರು
ಈ 15 ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಉಪಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಆಯೋಗ ಘೋಷಿಸಿತ್ತು. ಆದರೆ, 15 ಕ್ಷೇತ್ರಗಳ ಶಾಸಕರ ಅನರ್ಹತೆ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ಆಗಬೇಕಿರುವುದರಿಂದ ಹಾಗೂ ಚುನಾವಣೆ ಮುಂದೂಡಿಕೆಗೆ ಆಯೋಗದ ಯಾವುದೇ ಅಭ್ಯಂತರ ಇಲ್ಲದಿದ್ದಾಗ ಸುಪ್ರೀಂಕೋರ್ಟ್ ಚುನಾವಣೆಯನ್ನು ಮುಂದೂಡಿತ್ತು. ಅದರಂತೆ ಇದೀಗ ಆಯೋಗ ಉಪಚುನಾವಣೆಗೆ ಮತ್ತೊಮ್ಮೆ ಹೊಸ ದಿನಾಂಕವನ್ನು ಪ್ರಕಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ