ಬೆಂಗಳೂರು
ಸೆಪ್ಟೆಂಬರ್ ಮೂರನೇ ವಾರದ ಅಂತ್ಯಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಹಿರಿಯ ನಾಯಕ ಹೆಚ್.ವಿಶ್ವನಾಥ್ ಹಾಗೂ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ .ಸೆಪ್ಟೆಂಬರ್ ಹದಿನಾರರಂದು ಅನರ್ಹಗೊಂಡ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರಲಿದ್ದು ಸದರಿ ಪ್ರಕರಣವನ್ನು ಮರಳಿ ಸ್ಪೀಕರ್ಗೆ ಕಳಿಸಲು ಕೋರ್ಟ್ ಬಯಸುತ್ತದೆ ಎಂಬುದು ಬಿಜೆಪಿಯ ವಿಶ್ವಾಸ.
ಈ ಹಿಂದೆ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಾಗ ಸ್ಪೀಕರ್ ರಮೇಶ್ ಕುಮಾರ್ ಅವರು ಸಹಜ ನ್ಯಾಯವನ್ನು ಪಾಲಿಸಿಲ್ಲ. ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿಲ್ಲ.ಬದಲಿಗೆ ಏಕಾಏಕಿಯಾಗಿ ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ್ದಾರೆ.
ಹೀಗಾಗಿ ಪ್ರಕರಣದ ಬಗ್ಗೆ ಮರುಪರಿಶೀಲನೆ ಮಾಡಲು ರಾಜ್ಯ ವಿಧಾನಸಭೆಯ ಸ್ಪೀಕರ್ ಅವರಿಗೇ ಸೂಚನೆ ನೀಡಬೇಕು ಎಂದು ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದು ಹದಿನಾರರಂದು ಅದರ ವಿಚಾರಣೆ ನಡೆಯಲಿದೆ.
ಈ ವಿಚಾರಣೆಯ ಕಾಲದಲ್ಲಿ ತಮ್ಮ ಮನವಿಗೆ ಪುರಸ್ಕಾರ ಸಲ್ಲಲಿದೆ ಎಂದು ಅನರ್ಹಗೊಂಡ ಶಾಸಕರು ವಿಶ್ವಾಸದಲ್ಲಿದ್ದು ರಾಜ್ಯ ಬಿಜೆಪಿ ನಾಯಕರು ಕೂಡಾ ಇದೇ ಬಗೆಯ ವಿಶ್ವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗೆ ತಮ್ಮ ಪ್ರಕರಣ ಸ್ಪೀಕರ್ ಅಂಗಳಕ್ಕೆ ಬಂದರೆ ಅವರು ಅನರ್ಹಗೊಳಿಸಿ ಆದೇಶ ನೀಡಿದ ಹಳೆಯ ಸ್ಪೀಕರ್ ಕ್ರಮವನ್ನು ರದ್ದುಗೊಳಿಸಬಹುದು.ಆಮೂಲಕ ತಾವು ಮಂತ್ರಿಗಳಾಗಲು ಅವರ ತೀರ್ಮಾನ ಅನುಕೂಲಕರವಾಗಬಹುದು.ಈ ಪ್ರಕ್ರಿಯೆ ಹದಿನಾರರಂದು ಆರಂಭವಾಗಲಿದ್ದು ಕೆಲ ದಿನಗಳಲ್ಲಿ ಮುಗಿಯುತ್ತದೆ.ನಂತರ ರಾಜ್ಯ ಸಚಿವ ಸಂಪುಟವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಸ್ತರಿಸಲಿದ್ದು ಹನ್ನೆರಡು ಮಂದಿಯನ್ನು ಕ್ಯಾಬಿನೆಟ್ಗೆ ತೆಗೆದುಕೊಳ್ಳಲಿದ್ದಾರೆ.
ಈ ಪೈಕಿ ಅನರ್ಹಗೊಂಡಿದ್ದ ಶಾಸಕರ ಕೋಟಾದಡಿ ಹತ್ತು ಮಂದಿ ಮಂತ್ರಿಗಳಾಗಲಿದ್ದು ಬಿಜೆಪಿಯ ಇಬ್ಬರು ಮಂತ್ರಿಗಳಾಗಲಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಇಂದು ಪತ್ರಿಕೆಗೆ ವಿವರ ನೀಡಿದರು.ಹೀಗೆ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರ ಪೈಕಿ ಕುರುಬಸಮುದಾಯದ ಹಿರಿಯ ನಾಯಕ ಹೆಚ್.ವಿಶ್ವನಾಥ್ ಮತ್ತು ಬೆಳಗಾಂ ಜಿಲ್ಲೆಯ ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ