ಹರಪನಹಳ್ಳಿ
ತಾಲ್ಲೂಕಿನ ನಂದ್ಯಾಲ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಹಾವಳಿ ಕಂಡುಬಂದಿದ್ದು, ಇದರಿಂದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಗುರುವಾರ ರಾತ್ರಿ ಗ್ರಾಮದ ಹೊರವಲಯದ ಎಚ್.ಶೇಖರಪ್ಪ ಹಾಗೂ ಎ.ಹನುಮಂತಪ್ಪ ಎಂಬುವವರ ಮನೆಯ ಮುಂಭಾಗ ಕಟ್ಟಿದ್ದ ಕುರಿಯ ಮೇಲೆ ಚಿರತೆ ದಾಳಿ ನಡೆಸಲು ಹೊಂಚು ಹಾಕಿತ್ತು. ಇದೇ ವೇಳೆ ತೋಟಕ್ಕೆ ಹೋಗುತ್ತಿದ್ದ ಕೆ.ಚಂದ್ರಪ್ಪ, ಕೆ.ಬಸವರಾಜ ಅವರ ಬೈಕ್ ದೀಪದ ಬೆಳಕು ಬಿದ್ದು ಚಿರತೆ ಓಡಿ ಹೋಗಿದೆ. ಅದು `ಸುಮಾರು ನಾಲ್ಕೈದು ವರ್ಷದ ಚಿರತೆ ಇರಬಹುದು’ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
`ಆಹಾರ, ನೀರು ಅರಿಸಿ ಗ್ರಾಮಕ್ಕೆ ನುಗ್ಗುತ್ತಿರುವ ಚಿರತೆ ಸಾಕು ನಾಯಿಗಳ ಮೇಲೆ ದಾಳಿ ನಡೆಸುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಎರಡು ನಾಯಿ, ಎರಡು ಮಂಗಗಳು ಚಿರತೆ ದಾಳಿಗೆ ಬಲಿಯಾಗಿವೆ’ ಎಂದು ಗ್ರಾಮಸ್ಥ ಚಿಕ್ಕಬಿದರಿ ಕೊಟ್ರೇಶ್ ಅವರು ಮಾಹಿತಿ ನೀಡಿದ್ದಾರೆ.
ಕಡತಿ, ಮತ್ತೂರು, ಅಲಗಿಲವಾಡ, ನಂದ್ಯಾಲ, ವಟ್ಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಅಲ್ಲಿನ ಜನರನ್ನು ಭಯಭೀತಿಗೊಳಿಸಿವೆ. ನಂದ್ಯಾಲ ಸಮೀಪದ ಮತ್ತೂರು ಗ್ರಾಮದಲ್ಲಿ ಡಿ.6 ಹಾಗೂ ಡಿ.17ರಂದು ಅರಣ್ಯ ಇಲಾಖೆ ಈಗಾಗಲೇ ಎರಡು ಚಿರತೆಗಳನ್ನು ಸರೆ ಹಿಡಿದಿತ್ತು.
`ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಳ್ಳುತ್ತಿದೆ. ನದಿ ಅಂಚಿನ ಗ್ರಾಮ ಆಗಿರುವುದರಿಂದ ರಾತ್ರಿ ವೇಳೆ ರೈತರು ತೋಟಕ್ಕೆ ತೆರಳುತ್ತಾರೆ. ಚಿರತೆ ಹಾವಳಿಯಿಂದ ಜನರು ಮನೆ ಬಿಟ್ಟು ಹೊರಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಬೋನಿಟ್ಟು ಚೆರತೆ ಸೆರೆ ಹಿಡಿಯಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶ್ರೀ ಕೊಟ್ರೇಶ್, ಕೆ.ಮಲ್ಲಿಕಾರ್ಜುನ್, ಎ.ಸುರೇಶ್, ಮುಖಂಡರಾದ ಕೆ.ಸೋಮಪ್ಪ, ಚನ್ನಬಸಯ್ಯ, ಮಲ್ಲಾಪುರ ಬಸನಗೌಡ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
`ಚಿರತೆ ಹಾವಳಿ ಬಗ್ಗೆ ಗಮನಕ್ಕೆ ಬಂದಿಲ್ಲ. ಆದರೂ ಜನ-ಜಾನುವಾರ ರಕ್ಷಣೆ ದೃಷ್ಟಿಯಿಂದ ಇಲಾಖೆ ಸಿಬ್ಬಂದಿ ಕಳುಹಿಸಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಅಶೋಕ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
