ಬೆಂಗಳೂರು
ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ದಂತ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭ ಶುಕ್ರವಾರ ನಡೆಯಿತು.
ವಜ್ರ ಮಹೋತ್ಸವ ಸಮಾರಂಭವನ್ನು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಚ್ಚಿದಾನಂದ್ ಉದ್ಘಾಟಿಸಿ ವಜ್ರ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಮೇಯರ್ ಗಂಗಾಂಬಿಕೆ,ಕಾಲೇಜಿನ ನಿರ್ದೇಶಕ ಡಾ.ಎಂಎಂ.ಶೇಖರ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಹಿರೇಮಠ, ಕಾರ್ಯದರ್ಶಿ ಡಾ.ಸೂರ್ಯ ಪೆಡುವಾಲ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.
ಕಾಲೇಜಿನ ವಿಶೇಷತೆ
ನಗರದ ಹೃದಯ ಭಾಗದ ಕೆ.ಆರ್ ಮಾರುಕಟ್ಟೆಯ ಸಮೀಪದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1958ರಿಂದಲೇ ಅಂದಿನ ಕರ್ನಾಟಕ ರಾಜ್ಯದ ಏಕೈಕ ದಂತ ಕಾಲೇಜು, ಸರಕಾರಿ ದಂತ ವೈದ್ಯಕೀಯ ಕಾಲೇಜು ಆರಂಭಗೊಂಡಿತ್ತು.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರಂಭವಾದ ಸರಕಾರಿ ದಂತ ಕಾಲೇಜು, 1959ರಿಂದ ಪೂರ್ಣ ಪ್ರಮಾಣದ ದಂತ ಕಾಲೇಜು ಆಗಿ ಕಾರ್ಯಾರಂಭ ಮಾಡಿತ್ತು. ಅಂದಿನ ಕಾಲದಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯಲು ನಮ್ಮ ಕರ್ನಾಟಕ ರಾಜ್ಯದ ಅರ್ಹ ಬಡ ವಿದ್ಯಾರ್ಥಿಗಳಿಗೆ ಇದೇ ಕಾಲೇಜು ದಂತ ದೇವಾಲಯವಾಗಿ ಮಾರ್ಪಟಿತ್ತು.
ಆರಂಭದಲ್ಲಿ ಕೇವಲ 10 ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜ್ನಿಂದ 1965ರಲ್ಲಿ ಮೊದಲ ಬ್ಯಾಚ್ನ ದಂತ ವೈದ್ಯರು ಸಮಾಜಕ್ಕೆ ಸಮರ್ಪಿತರಾಗಿದ್ದರು.
ಸದ್ಯ ದಂತ ವೈದ್ಯಕೀಯ ಶಾಸ್ತ್ರದ ಎಲ್ಲಾ 9 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಅವಕಾಶವಿದೆ. ಬಾಯಿ ರೋಗ ಪತ್ತೆ ಮತ್ತು ಕ್ಷಕಿರಣ ವಿಭಾಗ, ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕ ವಿಭಾಗ, ವಕ್ರ ದಂತ ಚಿಕಿತ್ಸಾ ವಿಭಾಗ, ವಸಡು ತಜ್ಞ ವಿಭಾಗ, ಬೇರುನಾಳ ಚಿಕಿತ್ಸಾ ವಿಭಾಗ, ಮಕ್ಕಳ ದಂತಚಿಕಿತ್ಸಾ ವಿಭಾಗ.
ಕೃತಕ ಹಲ್ಲು ಜೋಡಣಾ ವಿಭಾಗ, ಬಾಯಿ ರೋಗ ಶಾಸ್ತ್ರ ವಿಭಾಗ, ಸಾಮಾಜಿಕ ದಂತ ವೈದ್ಯ ವಿಭಾಗ, ಹೀಗೆ ಎಲ್ಲಾ 9 ವಿಭಾಗಗಳ ತಜ್ಞರ ಸೇವೆ ಈ ದಂತ ದೇಗುಲದಲ್ಲಿ ಲಭ್ಯ ಇದೆ. 2007ರಲ್ಲಿ ಈ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿಗೆ ಸ್ವಾಯತ್ತೆಯ ಸ್ಥಾನಮಾನ ಸಿಕ್ಕಿ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆ ಎಂದು ಮರು ನಾಮಕರಣಗೊಳ್ಳಲಾಯಿತು ಎಂದು ಹಳೇ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದರು.
ಅಭಿಯಾನ
ಕಾಲೇಜಿನ ಹಳೆ ವಿದ್ಯಾರ್ಥಿಗಳು ಎಲ್ಲಾ ಸೇರಿ ವಿದ್ಯಾರ್ಥಿ ಕ್ಷೇಮಾಭಿವೃಧಿ ನಿಧಿ ಎಂದು ಬಡ ವಿದ್ಯಾರ್ಥಿಗಳ ಮತ್ತು ಬಡ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.ಈಗಾಗಲೇ 10ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹವಾಗಿದೆ. ಇದರಲ್ಲಿ ಬರುವ ಹಣವನ್ನು ಬಡ ವಿದ್ಯಾರ್ಥಿಗಳ ಟ್ಯೂಷನ್ ಫೀಸ್, ಹಾಸ್ಟೆಲ್ ಫೀಸ್, ಪುಸ್ತಕ ಮತ್ತು ಸಲಕರಣಗಳ ಖರೀದಿಗೆ ವಿನಿಯೋಗಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಈ ದಂತ ವೈದ್ಯಕೀಯ ಕಾಲೇಜು ಸಾವಿರಾರು ವೈದ್ಯರ ಪಾಲಿಗೆ ಪವಿತ್ರ ದೇಗುಲವಾಗಿದೆ. ಕಳೆದ 60 ವರ್ಷಗಳಿಂದ ಲಕ್ಷಾಂತರ ರೋಗಿಗಳ ನೋವನ್ನು ನಿವಾರಿಸಿ, ಮುಖದಲ್ಲಿ ಮುಗುಳು ನಗೆ ಹೊಮ್ಮಿಸಿ ಪ್ರಾಣವನ್ನು ರಕ್ಷಿಸಿದ ನಿಜವಾದ ಸರಕಾರಿ ದಂತ ದೇವಾಲಯ ಎಂಬುದಂತೂ ಸರ್ವಾಕಾಲಿಕ ಸತ್ಯ ಎನ್ನುತ್ತಾರೆ ವಿದ್ಯಾರ್ಥಿಗಳು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
