ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಚಳ್ಳಕೆರೆ ನಗರ ಹಾಗೂ ತಾಲ್ಲೂಕಿನಾದ್ಯಂತ ಬೋವಿ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮದೇಯಾದ ವೃತ್ತಿಯಲ್ಲಿ ಜೀವನ ನಿರ್ವಹಿಸುತ್ತಿದ್ದು, ಸರ್ಕಾರ ಕಳೆದ 1975-76ನೇ ಅವಧಿಯಲ್ಲಿ ನೀಡಿದ ಖಾಲಿ ನಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿಯವರ ಅನುದಾನದಲ್ಲಿ ಅಂದಾಜು 1.50 ಕೋಟಿ ವೆಚ್ಚದ ಬೃಹತ್ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು, ಇತ್ತಿಚೆಗೆ ಸದರಿ ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಟ್ಟಡ ಕಟ್ಟಲು ಮುಂದಾಗಿದ್ದು, ಇವರನ್ನು ವಿರೋಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ರರಿಗೆ ಬೋವಿ ಸಮಾಜದ ಬಂಧುಗಳು ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ತಾಲ್ಲೂಕು ಬೋವಿ ಸಮಾಜದ ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಆಂಜನೇಯ, ಕಳೆದ ಸುಮಾರು 45 ವರ್ಷಗಳಿಂದ ನಮ್ಮ ಸಮಾಜದ ಎಲ್ಲಾ ಚಟುವಟಿಕೆಗಳು ಈ ಕೇಂದ್ರದಿಂದಲೇ ಆರಂಭವಾಗುತ್ತವೆ.
ಶಾಸಕ ಟಿ.ರಘುಮೂರ್ತಿಯವರ ಅನುದಾನದಲ್ಲಿ ಕಳೆದ 2017-18ನೇ ಸಾಲಿನಲ್ಲಿ ನೂತನ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳೆದ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಈ ಜಾಗ ನನಗೆ ನಗರಸಭೆಯವರು ನೀಡಿದ್ದಾರೆಂದು ಹೇಳಿ ಮನೆ ಕಟ್ಟಲು ಮುಂದಾದಾಗ ಸಮಾಜದ ಎಲ್ಲರೂ ಪ್ರತಿಭಟಿಸಿದ್ಧಾರೆ.
ಬೋವಿ ಸಮಾಜದ ತಾಲ್ಲೂಕು ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅನೀಲ್ಕುಮಾರ್ ಮಾತನಾಡಿ, ನಾವು ನಮ್ಮದೇಯಾದ ಸರ್ಕಾರವೇ ನೀಡಿದ ಜಾಗದಲ್ಲಿ ಕಾನೂನಿನ ನಿಯಮದಡಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು, ಕಳೆದ ಕೆಲವು ದಿನಗಳಷ್ಟೇ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಸುಳ್ಳು ಮಾಹಿತಿ ನೀಡಿ ಕಟ್ಟಡ ಕಟ್ಟಲು ಮುಂದಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಮನವಿ ಮಾಡಲಾಗಿದೆ ಎಂದರು.
ಬೋವಿ ಸಮಾಜದ ಹಿರಿಯ ಮುಖಂಡ, ಗುತ್ತಿಗೆದಾರ ಎಚ್. ತಿಪ್ಪೇಸ್ವಾಮಿ ಸೋಮಗುದ್ದು ಮಾತನಾಡಿ, ಸಮಾಜದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಮ್ಮ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ನಾವು ನಮ್ಮದೇಯಾದ ಸರ್ಕಾರವೇ ನೀಡಿದ ಜಾಗದಲ್ಲಿ ಭವನ ನಿರ್ಮಿಸುತ್ತಿದ್ದೇವೆ.
ನಾವು ಎಂದಿಗೂ ಕಾನೂನನ್ನು ಗೌರವಿಸುವವರು ಆದರೆ, ವ್ಯಕ್ತಿಯೊಬ್ಬ ಅನಗತ್ಯವಾಗಿ ಸಮಸ್ಯೆಯನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಮನವಿ ಮಾಡಿದ್ದೇವೆ ಎಂದರು.
ಮನವಿ ಸ್ವೀಕರಿಸಿದ ತಾಲ್ಲೂಕು ಆಡಳಿತ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಕ್ರಮವಾಗಿ ಮನೆ ನಿರ್ಮಿಸಲು ಮುಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ಧಾರೆ.ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ, ಉಪನ್ಯಾಸಕ ಟಿ.ತಿಪ್ಪಮ್ಮ, ಸತೀಶ್ಕುಮಾರ್, ಜಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.