ಮೇ 21ರ ನಂತರ ಮತ್ತೆ ತುಂಗಭದ್ರಾ ಹೂಳು ತೆಗೆಯಲು ನಿರ್ಧಾರ-ಜಿ.ಪುರುಷೋತ್ತಮಗೌಡ

ಬಳ್ಳಾರಿ

      ಕರ್ನಾಟಕಾಂಧ್ರ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ಜನ-ಜಾನುವಾರುಗಳ ಜೀವ ಸಂಜೀವಿನಿಯಾದ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದ್ದು ಮೇ 21ರ ನಂತರ ಮತ್ತೆ ಹೂಳು ತೆಗೆಯಲು ರೈತರು ಮುಂದಾಗಿದ್ದಾರೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ತಿಳಿಸಿದ್ದಾರೆ.

        ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಲ್ಲಿ ಹೂಳು ತೆಗೆಯಲು ರೈತರು ಸಾಂಕೇತಿಕವಾಗಿ ಮುಂದಾಗಿದ್ದರು. ಈ ಬಾರಿಯೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ರೈತರು, ಸ್ವಾಮೀಜಿಗಳು, ಮಠಾಧೀಶರು, ನಾಗರಿಕರ ಸಹಕಾರದೊಂದಿಗೆ ಹೂಳು ತೆಗೆಯಲು ಮುಂದಾಗಿರುವುದಾಗಿ ಹೇಳಿದರು. ಗಣಿಗಾರಿಕೆಯಿಂದಾಗಿ ಯಥೇಚ್ಛ ಪ್ರಮಾಣದ ಮಣ್ಣು ಮಳೆಯ ನೀರಿನೊಂದಿಗೆ ಜಲಾಶಯದ ಒಡಲು ಸೇರುತ್ತಿದೆ.

       ಗಣಿಗಾರಿಕೆ ನಡೆಸುವವರು ತಮ್ಮ ಬಾರ್ಡರ್ ನಲ್ಲಿ 9 ಅಡಿ ಎತ್ತರದ ತಡೆಗೋಡೆ ನಿರ್ಮಾಣ ಮಾಡಬೇಕು. ಅಂತವರಿಗೆ ಮಾತ್ರ ಗಣಿಗಾರಿಕೆ ನಡೆಸಲು ಅವಕಾಶ ನೀಡಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದ ಗೌಡರು, ಜಾನುವಾರುಗಳಿಗಾಗಿ ಕೂಡ್ಲಿಗಿ ತಾಲೂಕಿನಲ್ಲಿ ಮಾತ್ರ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಸಿರುಗುಪ್ಪ ತಾಲೂಕಿನ ರಾರಾವಿಯಲ್ಲೂ ಇಂತಹ ಮೇವಿನ ಬ್ಯಾಂಕ್ ಸ್ಥಾಪಿಸಬೇಕು. ಅದೇರೀತಿ ಕೊಪ್ಪಳ ಜಿಲ್ಲೆಯ ಕಾರಟಗಿ, ರಾಯಚೂರು ಜಿಲ್ಲೆಯ ಜವಳಗೇರಾದಲ್ಲೂ ಮೇವಿನ ಬ್ಯಾಂಕ್ ನಿರ್ಮಿಸಬೆಕು. ಪಶುಸಂಗೋಪನಾ ಸಚಿವ ನಾಡಗೌಡ ನಮ್ಮ ಭಾಗದವರೇ ಆಗಿರುವುದರಿಂದ ರೈತರು ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ಈ ಕೂಡಲೇ ಮೇವು ಬ್ಯಾಂಕ್ ಸ್ಥಾಪಿಸಬೇಕೆಂದರು.

ನದಿಜೋಡಣೆ ಆಗಲಿ:

        ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿರುವಂತೆ ನದಿ ಜೋಡಣೆ ಕಾರ್ಯ ಆಗಬೇಕಿದೆ. ಕಳೆದ ಸಂಸತ್ ಚುನಾವಣೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸಹ ನದಿ ಜೋಡಣೆ ಕುರಿತು ಪ್ರಸ್ತಾಪಿಸಿದ್ದಾರೆ. ಕೃಷ್ಣಾ ನದಿಯ ನೀರನ್ನು ಕೊಪ್ಪಳ ಜಿಲ್ಲೆಯ ಹಿರೇಹಳ್ಳದ ಮೂಲಕ ತುಂಗಭದ್ರಾ ನದಿಗೆ ಜೋಡಣೆ ಮಾಢಿದಲ್ಲಿ ರೈತರಿಗೆ ಅನುಕೂಲವಾಗಲಿದೆ. 25 ಕಿ.ಮೀ.ವ್ಯಾಪ್ತಿಯಲ್ಲಿನ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

       ರೈತ ಮುಖಂಡರಾದ ಕೊಂಚಿಗೇರಿ ಗೋವಿಂದಪ್ಪ, ಕೊಂಚಿಗೇರಿ ಮಲ್ಲಪ್ಪ, ಕೃಷ್ಣಾನಗರ ಕ್ಯಾಂಪ್ ಶಿವಯ್ಯ, ಗಂಗಾವತಿ ವೀರೇಶ್, ಕರೂರು ರಾಮನಗೌಡ, ಬಸವನಗೌಡ, ನಾಗೇನಹಳ್ಳಿ ಮಲ್ಲಿಕಾರ್ಜುನಗೌಡ, ಕೆಎಂ ಹನುಮನಗೌಡ, ಶ್ರೀಧರ್ ಜಾಲಿಹಾಳ, ಮುಷ್ಟಿಗಟ್ಟಿ ಭೀಮನಗೌಡ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link