ಬೆಂಗಳೂರು
ಮದ್ಯಪಾನ ಮಾಡುವ ವೇಳೆ ಆಟೋ ಚಾಲಕ ರಘು ಎಂಬಾತನನ್ನು ಕೊಲೆ ಮಾಡಿದ್ದ ಕುಖ್ಯಾತ ರೌಡಿ ಶ್ರೀಧರ್ ಅಲಿಯಾಸ್ ಗೊರಿಲ್ಲಾ ಸೇರಿ ಮೂವರು ಆರೋಪಿಗಳು ಗುರಾಯಿಸಿದ ಕಾರಣಕ್ಕಾಗಿ ರಘುನನ್ನು ಕೊಲೆಮಾಡಿರುವುದಾಗಿ ಜ್ಞಾನಭಾರತಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ರಘುನನ್ನು ಕೊಲೆಗೈದ ಗೋವಿಂದರಾಜು ನಗರದ ರೌಡಿ ಶ್ರೀಧರ್ ಅಲಿಯಾಸ್ ಗೊರಿಲ್ಲಾ (37) ಆತನ ಸಹಚರರಾದ ಅಂಜನ ನಗರದ ಮಂಜೇಶ್ (23), ಕೆ.ಆರ್. ನಗರದ ಯ¾್ರಮ್ ಹಳ್ಳಿಯ ವೆಂಕಟೇಶ್ ಅಲಿಯಾಸ್ ವೆಂಕನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ದ್ವಿಚಕ್ರವಾಹನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದ್ದಾರೆ
ಕಳೆದ ಜ. 24 ರಂದು ರಾತ್ರಿ 11.30ರ ವೇಳೆ ನಾಗರಬಾವಿಯ ಎನ್ಜಿಎಫ್ ಲೇಔಟ್ನ ಸನ್ ಶೈನ್ ಬಾರ್ ಅಂಡ್ ರೆಸ್ಟೊರೆಂಟ್ನಲ್ಲಿ ಮದ್ಯಪಾನ ಮಾಡಲು ಹೋಗಿದ್ದ ಕೆಂಗುಂಟೆಯ ಎಪಿಎಂ ಲೇಔಟ್ನ ಆಟೋ ಚಾಲಕ ರಘು ಮದ್ಯ ಸೇವಿಸಿದ ಬಿಲ್ ಅನ್ನು ಪಾವತಿ ಮಾಡಲು ಕೌಂಟರ್ ಬಳಿ ಹೋಗಿದ್ದರು.
ಈ ವೇಳೆ ಇಬ್ಬರು ಅಪರಿಚಿತರು, ರಘುವನ್ನು ನೋಡಿ ಏಕೆ ಗುರಾಯಿಸುತ್ತಿದ್ದೀಯ ಎಂದು ಜಗಳ ತೆಗೆದಿದ್ದಾರೆ. ಜಗಳವು ಮದ್ಯದ ಅಮಲಿನಲ್ಲಿ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶ್ರೀಧರ್ ಹರಿತವಾದ ಆಯುಧದಿಂದ ರಘುವಿನ ಹೊಟ್ಟೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸ್ ಇನ್ಸ್ಪೆಕ್ಟರ್, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರೌಡಿ ಶ್ರೀಧರ್ ಸೇರಿದಂತೆ, ಮೂವರನ್ನು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆಯ ರೌಡಿಪಟ್ಟಿಯಲ್ಲಿರುವ ಶ್ರೀಧರ್ ವಿರುದ್ಧ ಕೊಲೆ, ಕೊಲೆಯತ್ನ, ಹಲ್ಲೆ, ಸುಲಿಗೆ, ಡಕಾಯಿತಿ, ಡಕಾಯಿತಿ ಸಂಚು, ಇನ್ನಿತರ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಮತ್ತೊಬ್ಬ ಆರೋಪಿ ಮಂಜೇಶ್ ವಿರುದ್ಧ ತಾವರೆಕೆರೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
