ದಾವಣಗೆರೆ:
ತನ್ನ ವಶದಲ್ಲಿದ್ದ ಭಾರತೀಯ ವಾಯುಪಡೆಯ ವೀರ ಯೋಧ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದು ಭಾರತದ ಸೈನ್ಯದ ಶಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿರವರ ರಾಜತಾಂತ್ರಿಕ ಗೆಲುವಾಗಿದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ್ಯ ಕಾರ್ಯದರ್ಶಿ ಎಸ್.ಟಿ. ವೀರೇಶ್ ಹೇಳಿದರು.
ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಯೋಧ ಅಭಿನಂದನ್ ಬಿಡುಗಡೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಆಚರಿಸಿದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಭಾರತೀಯರಿಗೆ ಇಂದು ಸಂಭ್ರಮದ ದಿನವಾಗಿದ್ದು, ಎರಡು ದಿನಗಳಲ್ಲಿ ವಿರೋಧಿ ಸೈನಿಕನನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದು ಇತಿಹಾಸದಲ್ಲಿ ಮೊದಲು ಎಂದರು.
ಯೋಧರಿಗೆ ದೇಶದ ಜನರು ಒಂದಾಗಿ ಆತ್ಮಸ್ಥೈರ್ಯ ತುಂಬಿದ್ದಾರೆ. ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಂತೋಷದ ಸಂಗತಿ. ಅಭಿನಂದನ್ ಅವರ ಧೈರ್ಯ ಶೌರ್ಯವನ್ನು ಪ್ರತಿಯೊಬ್ಬ ಭಾರತಿಯನೂ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತ ಎಂದಿಗೂ ಶಾಂತಿಧೂತ ರಾಷ್ಟ್ರವಾಗಿದ್ದು, ನಮ್ಮ ರಾಷ್ಟ್ರ ಎಂದಿಗೂ ಯುದ್ದ ಬಯಸುವುದಿಲ್ಲ. ಆದರೆ, ಭಯೋತ್ಪಾದನೆ ವಿಚಾರದಲ್ಲಿ ಹೋರಾಟ ನಡೆಸುತ್ತಿದೆ. ಭಯೋತ್ಪಾದನೆ ನಿರ್ಮೂಲನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಕಲ್ಪ ತೊಟ್ಟಿದ್ದಾರೆ. ಅದಕ್ಕೆ ಪ್ರತಿಯೋರ್ವ ನಾಗರಿಕರು ಬೆಂಬಲ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.ವಿಜಯೋತ್ಸವದಲ್ಲಿ ವೇದಿಕೆಯ ಮುಖಂಡರಾದ ಸತೀಶ್ ಪೂಜಾರಿ, ಕೆ.ಆರ್. ಮಲ್ಲಿಕಾರ್ಜುನ, ಮಂಜುನಾಥ, ರಾಕೇಶ್ ಜಾಧವ್, ಪವನ್, ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್, ಗೌತಮ್ ಜೈನ್, ರಾಜು ನಿಲಗುಂದ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
