ಪಾವಗಡ
ನೀರು ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕದಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷರಾದ ವಿ.ನಾಗಭೂಷಣ ರೆಡ್ಡಿ ತಿಳಿಸಿದರು.
ಶುಕ್ರವಾರ ಗ್ರೇಡ್ 2 ತಹಸೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ತಾಲ್ಲೂಕಿನ ಅಂತರ್ಜಲ ಮಟ್ಟದಲ್ಲಿ ಅತಿ ಹೆಚ್ಚು ಪ್ಲೋರೈಡ್ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ್ದು, ಘಟಕಗಳಲ್ಲಿ ನೀರು ಶುದ್ಧೀಕರಿಸುವ ವೇಳೆ ಬಳಸುವ ರಾಸಾಯನಿಕದಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಘಟಕಗಳಲ್ಲಿ ನೀರು ಸಿಹಿ ಬರಲೆಂದೇ ಅತಿ ಹೆಚ್ಚು ರಾಸಾಯನಿಕ ಬಳಸಲಾಗುತ್ತಿದೆ. ಇಷ್ಟು ಲೀಟರ್ ನೀರು ಶುದ್ಧೀಕರಣಕ್ಕೆ ಇಂತಿಷ್ಟೆ ರಾಸಾಯನಿಕ ಬಳಕೆ ಮಾಡಬೇಕೆಂಬ ನಿಯಮವಿದ್ದರೂ ಪಾಲಿಸದ ಕಾರಣ ಇದರ ಪರಿಣಾಮ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಶುದ್ದಗಂಗಾ, ಪಾವನಗಂಗಾ, ಖಾಸಗಿ ಮತ್ತು ಸರ್ಕಾರಿ ಘಟಕಗಳಲ್ಲಿನ ನೀರು ಸೇವನೆಯಿಂದ ಜನತೆ ರೋಗರುಜಿನಕ್ಕೆ ತುತ್ತಾದರೆ ಘಟಕಗಳ ಏಜೆನ್ಸಿ ನೇರ ಹೊಣೆ ಮತ್ತು ಚಿಕಿತ್ಸೆಯ ವೆಚ್ಚ ಬರಿಸಬೇಕಾಗುತ್ತದೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನತೆಗೆ ಶುದ್ಧಕುಡಿಯುವ ನೀರು, ಗುಣಮಟ್ಟದ ನೀರನ್ನು ನೀಡಬೇಕೆಂದು ಎಚ್ಚರಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಗ್ರೇಡ್ 2 ತಹಸೀಲ್ದಾರ್ ಹನುಮಂತರಾಯಪ್ಪ ಸಂಬಂಧಿಸಿದ ಘಟಕಗಳ ಏಜೆನ್ಸಿಗೆ ಗುಣಮಟ್ಟದ ನೀರು ವಿತರಣೆ ಮಾಡುವಂತೆ ಕ್ರಮಕೈಗೊಳ್ಳಲಾಗುವುದೆಂದರು.
ಈ ಸಂದರ್ಭದಲ್ಲಿ ಸರ್ವಧರ್ಮ ಶಾಂತಿ ಪೀಠದ ರಾಮಮೂರ್ತಿ ಸ್ವಾಮೀಜಿ, ಎಚ್,ಆರ್,ಎಫ್,ಡಿ.ಎಲ್ ಜಿಲ್ಲಾಧ್ಯಕ್ಷರಾದ ಹನುಮಂತರಾಯಪ್ಪ, ದಂಡೋರ ಅಧ್ಯಕ್ಷರಾದ ವಳ್ಳೂರು ನಾಗೇಶ್, ಕನ್ನಮೇಡಿ ಬಿ.ನಾಗರಾಜಯ್ಯ, ಸಾಹಿತಿ ಸಣ್ಣ ನಾಗಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
