ತಿಪಟೂರು 

ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದು ಮತ್ತು ಪರರ ಕಷ್ಟವನ್ನು ತನ್ನ ಕಷ್ಟವೆಂದು ತಿಳಿದು ಅವರಿಗೆ ಸ್ಪಂದಿಸುವುದು ಮನುಜ ಧರ್ಮವೆಂದು ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ತಿಳಿಸಿದರು .ತಾಲ್ಲೂಕಿನ ನೊಣವಿನಕೆರೆಯಲ್ಲಿ ನಿರ್ಮಾಣ ಮಾಡಿರುವ ಆದಿಚುಂಚನಗಿರಿ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಾಣ ಮಾಡಲಾಗಿದ್ದು, ಎಲ್ಲಾ ರೀತಿಯ ಸಾಮಾಜಿಕ ಕಾರ್ಯಕ್ರಮಗಳಿಗೆ ಸಹಾಯವಾಗಲಿದೆ. ಹಿರಿಯ ಶ್ರೀಗೂ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಜನರ ಕಷ್ಟಗಳಿಗೆ ಸ್ಪಂದಿಸಿ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಎಲ್ಲರ ಕರ್ತವ್ಯ, ತಾವು ದುಡಿದ ಹಣದಲ್ಲಿ ಇಂತಿಷ್ಟು ಹಣವನ್ನು ದೀನ ದಲಿತರ ಉದ್ದಾರಕ್ಕೆ ತೆಗೆದಿಡಬೇಕು ಎಂದರು.
ತುರುವೆಕೆರೆಯಿಂದ ನೊಣವಿನಕೆರೆ ಗ್ರಾಮದವರೆಗೂ ಬೃಹತ್ ಬೈಕ್ ರ್ಯಾಲಿಯೊಂದಿಗೆ ಪೂರ್ಣ ಕಂಭದ ಭವ್ಯಸ್ವಾಗತ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಾಹವಾಗಿ 50 ವರ್ಷ ಪೂರೈಸಿರುವ ಹಿರಿಯ ದಂಪತಿಗಳಿಗೆ ಸನ್ಮಾನ ಮಾಡಲಾಯಿತು ಹಾಗೂ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ನಾರಾಯಣ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಶ್ರೀ.ಡಾ ರುದ್ರಮುನಿಸ್ವಾಮೀಜಿ, ದಸರಿಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಟ್ಟಡ ಸಮಿತಿ ಅಧ್ಯಕ್ಷ ಡಾ.ಜಿ.ಬಿ.ವಿವೇಚನ್, ಶಾಸಕರುಗಳಾದ ಬಿ.ಸಿ.ನಾಗೇಶ್, ಮಸಾಲೆ ಜಯರಾಮ್, ಚೌಡರೆಡ್ಡಿ ತೂಪಲ್ಲಿ, ಬೆಮೆಲ್ ಕಾಂತರಾಜು, ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








