ಹೊಸಪೇಟೆ:
ಕೇಂದ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರೇ ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅಶೋಕ ಜೀರೆ ತಿಳಿಸಿದರು.
ಸ್ಥಳೀಯ ಪಟೇಲ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಲವೆಡೆ ಹಿನ್ನಡೆ ಆಗಿದೆ. ಸ್ಥಳೀಯ ಅಭ್ಯರ್ಥಿಗಳ ಆಯ್ಕೆಯಲ್ಲಿನ ಗೊಂದಲ, ಇನ್ನಿತರ ಕಾರಣಗಳಿಂದಲೂ ಫಲಿತಾಂಶದಲ್ಲಿ ಏರುಪೇರಾಗಿರಬಹುದು ಎಂದರು.
ಮಂಡಲ ಅಧ್ಯಕ್ಷ ಅನಂತ ಪದ್ಮನಾಭ 8 ಶಕ್ತಿ ಕೇಂದ್ರಗಳಿಗೆ ಪ್ರಮುಖರನ್ನು ನೇಮಕಮಾಡಿ ಮಾತನಾಡಿ, ಪಕ್ಷಕ್ಕೆ ಸದಸ್ಯರೇ ಜೀವಾಳವಾಗಿದ್ದಾರೆ . ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯ ಸರಕಾರ ಜನಸಾಮಾನ್ಯರ ಹಿತಕಡೆಗಣಿಸಿ ಸ್ವಾರ್ಥ ಸಾಧನೆಗೆ ಮುಂದಾಗಿದೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ 25 ಸಂಸದರನ್ನು ಆಯ್ಕೆಮಾಡುವಲ್ಲಿ ಸಂಘಟಿತ ಶ್ರಮ ಹಾಗೂ ಕಾರ್ಯಕರ್ತರ ಕಠಿಣ ಪರಿಶ್ರಮ ಕಾರಣವಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
