ಬೆಂಗಳೂರು
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ರಾಜೀವ್ ಸಕ್ಸೇನಾ ಮತ್ತು ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಕರೆತರಲಾಗಿದ್ದು, ಈ ವಿಷಯವನ್ನು ಮುಂದಿಟ್ಟು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕರನ್ನು ಅಣಕವಾಡಿದ್ದಾರೆ.
ಒಳ್ಳೆಯ ಸುದ್ದಿ ಬರುತ್ತಿದೆ ಗೆಳೆಯರೇ, ಯುಎಇ ಅಧಿಕಾರಿಗಳು ಕಾಂಗ್ರೆಸ್ನ ಗೆಳೆಯರನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಭಾರತದ ವಶಕ್ಕೆ ಒಪ್ಪಿಸಲಾಗಿದೆ. ಬಿಜೆಪಿ ಸರ್ಕಾರದ ಮೇಲೆ ಜನ ಸಾಮಾನ್ಯದ ವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಮಾಡಿದ್ದಾರೆ.
ರಕ್ಷಣಾ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಪತ್ತೆಹಚ್ಚುವ ನಮ್ಮ ಪ್ರಯತ್ನಕ್ಕೆ ತನಿಖಾ ಸಂಸ್ಥೆಗಳು ಮಾಡಿರುವ ಈ ಕೆಲಸ ಸಹಕಾರಿಯಾಗಲಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಸ್ಟಿಯನ್ ಮಿಷಲ್ ಅವರ ಸಹಾಯಕ ಹಾಗೂ ಸಹ ಆರೋಪಿ ರಾಜೀವ್ ಸಕ್ಸೇನಾ ಮತ್ತು ಕಾಪೆರ್Çೀರೇಟ್ ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಕಳೆದ ರಾತ್ರಿ ದುಬೈಯಲ್ಲಿ ಬಂಧಿಸಲಾಗಿದೆ.
ರಾಜೀವ್ ಸಕ್ಸೇನಾ ಅವರು ಪಾಟಿಯಾಲ ಹೌಸ್ ಕೋರ್ಟ್ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ 2018, ಡಿಸೆಂಬರ್ನಲ್ಲಿ ವಜಾಗೊಂಡಿತ್ತು. ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಗಳಿಗೆ ಅವರು ಯಾವುದೇ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ದೇಶಕ್ಕೆ ಕರೆತರುವ ಪ್ರಯತ್ನ ನಡೆಸಲಾಗಿತ್ತು.
ರಕ್ಷಣಾ ಒಪ್ಪಂದ ಹಗರಣದಲ್ಲಿ ರಾಜೀವ್ ಸಕ್ಸೇನಾ ಸಹ ಆರೋಪಿಯಾಗಿದ್ದಾರೆ. ದುಬೈ ಮೂಲದ ಚಾರ್ಟಡ್ ಅಕೌಂಟೆಂಟ್ ಆಗಿರುವ ಅವರು ಈ ಒಪ್ಪಂದದಲ್ಲಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜಾರಿ ನಿರ್ದೇಶನಾಲಯದ ದೋಷಾರೋಪ ಪಟ್ಟಿಯಲ್ಲಿಯೂ ಅವರ ಹೆಸರಿದೆ.
ದೀಪಕ್ ತಲ್ವಾರ್ ಕೂಡ ವಿಮಾನಯಾನ ಒಪ್ಪಂದಗಳನ್ನು ಒದಗಿಸಿದ ಮತ್ತು 1000 ಕೋಟಿ ರೂ.ಅಧಿಕ ಆದಾಯವನ್ನು ಮರೆಮಾಚಿದ ಆರೋಪ ಎದುರಿಸುತ್ತಿದ್ದಾರೆ.
2017ರಲ್ಲಿ ರಾಜೀವ್ ಸಕ್ಸೇನಾ ಅವರ ಪತ್ನಿ ಶಿವಾನಿ ಸಕ್ಸೇನಾ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈಗ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಅವರನ್ನು ಭಾರತಕ್ಕೆ ಕರೆತಂದ ಎರಡು ತಿಂಗಳ ಬಳಿಕ ಇದೀಗ ಇವರಿಬ್ಬರನ್ನು ದೇಶಕ್ಕೆ ಕರೆತರಲಾಗಿದೆ.
ರಾಜೀವ್ ಸಕ್ಸೇನಾ, ಅವರ ಪತ್ನಿ ಶಿವಾನಿ ಸಕ್ಸೇನಾ ಮತ್ತು ಅವರ ಇಬ್ಬರು ದುಬೈ ಮೂಲದ ಕಂಪನಿಗಳು ಸ್ಥಿರಾಸ್ತಿ ಮತ್ತು ಷೇರುಗಳನ್ನು ಖರೀದಿಸುವ ಮೂಲಕ ಅಕ್ರಮ ಆದಾಯಗಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
