ಹಿರಿಯೂರು :
ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಮುಸ್ಲಿಮರು, ವರುಣನ ಕೃಪೆಗಾಗಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ 2-30ಕ್ಕೆ ಪ್ರಾರಂಭಿಸಿದ ಪ್ರಾರ್ಥನೆ ಒಂದೂವರೆ ಗಂಟೆ ಕಾಲ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಮುಸ್ಲಿಂ ಗುರುಗಳು-ಮುಖಂಡರು, ಜಿಲ್ಲೆಯಲ್ಲಿ ಮಳೆ ಇಲ್ಲದೇ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಹನಿ ನೀರಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ದೇವರಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬುದು ನಮ್ಮ ನಂಬಿಕೆ. ನಮ್ಮ ಕೂಗು ದೇವರಿಗೆ ಕೇಳಿಸಿ ಮಳೆ ಬರಲಿದೆ ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ಕೃಷಿಕರು, ಜಾನುವಾರು, ಜನತೆ ನೆಮ್ಮದಿಯಿಂದ ಜೀವಿಸಬೇಕು. ವಿ.ವಿ.ಸಾಗರ ಜಲಾಶಯ ತುಂಬಿ ಕೃಷಿ ಚಟುವಟಿಕೆ ಚುರುಕುಗೊಳ್ಳಬೇಕು. ಜನತೆ ಕೂಡ ನೀರನ್ನು ಮಿತ ಬಳಕೆ ಮಾಡುವತ್ತ ಗಮನ ಹರಿಸಬೇಕು.ಕೆರೆ, ಕಟ್ಟೆಗಳ ಉಳಿವು, ಮರ ಗಿಡಗಳನ್ನು ಬೆಳೆಸುವತ್ತ ಸರ್ಕಾರದ ಜೊತೆ ನಾವುಗಳು ಕೈಜೋಡಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭೀಕರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜಾಮೀಯಾ ಮಸೀದಿ ಗುರುಗಳಾದ ಸಿಗ್ಬತ್ಉಲ್ಲಾ, ಮೌಲಾನ ಇಲಿಯಾಸ್, ಮೌಲಾನ ವಸೀಖ್ ಉಲ್ಲಾ, ಮೌಲಾನ ರಬ್ಬಾನಿ, ಜಾಮಿಯಾ ಮಸೀದಿ, ಅಧ್ಯಕ್ಷರಾದ ಬಿ.ಎಸ್.ನವಾಬ್ಸಾಬ್, ಹಿರಿಯೂರು ಸೇರಿ ವಿವಿಧ ಹಳ್ಳಿಗಳಿಂದ ಆಗಮಿಸಿದ ನೂರಾರು ಮುಸ್ಲಿಮರು ಪಾಲ್ಗೊಂಡಿದ್ದರು.