ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಚ್ಚಾರಿತ್ರ್ಯವನ್ನು ಹೊಂದಬೇಕು.

ಹೊಸಪೇಟೆ :

     ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಚ್ಛಾರಿತ್ರ್ಯವನ್ನು ಹಾಗು ಸಾಮಾಜಿಕ ಕಳಕಳಿಯನ್ನು ಹೊಂದಬೇಕು ಎಂದು ಗೌರವಾನ್ವಿತ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಹೇಳಿದರು.ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ(ರೂಸಾ), ಎಂಎಚ್‍ಆರ್‍ಡಿ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ “ಕೆಪ್ಯಾಸಿಟಿ ಬಿಲ್ಡಿಂಗ್ ವರ್ಕ್‍ಶಾಪ್”ನ್ನು ಉದ್ಘಾಟಿಸಿ ಮಾತನಾಡಿದರು.

       ವಿದ್ಯಾರ್ಥಿಗಳು ಎಚ್. ನರಸಿಂಹಯ್ಯ ಅವರಂತೆ ದಿವ್ಯದೃಷ್ಟಿ ಹೊಂದಲು ಪ್ರಯತ್ನಿಸಬೇಕು. ಉನ್ನತ ಮೇಲ್ಮಟ್ಟದಲ್ಲಿರುವ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮ್ಮ ಒಂದು ವಿಶ್ವವಿದ್ಯಾಲಯವು ಏಕೆ ಸೇರಿಲ್ಲ? ಎಂದು ಪ್ರಶ್ನಿಸಿಕೊಳ್ಳಬೇಕು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಬ್ಬರಿಗೂ ಸಮಾನ ಜವಾಬ್ದಾರಿಗಳು ಇವೆ. ವಿದ್ಯಾರ್ಥಿಗಳು ದೇವಾಲಯದ ಮೆಟ್ಟಿಲಾಗಬೇಕೆ? ಅಥವಾ ಮೂರ್ತಿಯಾಗಬೇಕೆ? ಎಂದು ಯೋಚಿಸಿ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡ ವಿಶ್ವವಿದ್ಯಾಲಯವು ಇನ್ನೊಂದು ನಳಂದ ವಿಶ್ವವಿದ್ಯಾಲಯ ಆಗಲು ಪ್ರಯತ್ನಿಸಬೇಕು ಎಂದರು.

        ಅಧ್ಯಕ್ಷತೆ ವಹಿಸಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕನ್ನಡ ಸಂಸ್ಕøತಿ, ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ವಿಶ್ವವಿದ್ಯಾಲಯವು ಮೂಂಚೂಣಿಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು. ತನ್ನ ಸಂಶೋಧನೆಗಳ ಮೂಲಕ ರಾಷ್ಟ್ರಕ್ಕೆ ಮಾದರಿಯಾಗುವ ಅವಕಾಶ ಕನ್ನಡ ವಿಶ್ವವಿದ್ಯಾಲಯಕ್ಕೆ ದೊರೆತಿದೆ. ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿದ್ದು ಸಶಕ್ತವಾಗಿದ್ದರೆ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವುದಿಲ್ಲ. ಖಾಸಗಿ ಶಾಲೆಯ ಮಕ್ಕಳಿಗೆ ದಕ್ಕದ ಪ್ರಪಂಚದ ಜ್ಞಾನ ಸರ್ಕಾರಿ ಶಾಲೆಯ ಮಕ್ಕಳಿಗೆ ಇರುತ್ತದೆ. ಖಾಸಗಿ ಕಾಲೇಜುಗಳಲ್ಲಿರುವ ಮೂಲಭೂತ ಸೌಲಭ್ಯ ಗುಣಮಟ್ಟದ ಪ್ರಯೋಗಾಲಯದ ಸೌಲಭ್ಯಗಳನ್ನು ಸರ್ಕಾರದ ಪದವಿ ತಾಂತ್ರಿಕ ಕಾಲೇಜುಗಳಲ್ಲಿ ಕಲ್ಪಿಸಿಕೊಟ್ಟರೆ ಖಾಸಗಿ ಕಾಲೇಜುಗಳತ್ತ ಮುಖ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಉದ್ಯೋಗಾಧಾರಿತ ಕೌಶಲ್ಯಾಧಾರಿತ ಶಿಕ್ಷಣ ಒದಗಿಸಬೇಕು ಎಂದರು.

        ಇದೇ ವೇಳೆ ಕನ್ನಡ ವಿಶ್ವವಿದ್ಯಾಲಯಕ್ಕೆ ಬೇಕಾದ ಅಗತ್ಯ ನೆರವನ್ನು ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು ಪ್ರಸ್ತಾವನೆ ಕಳಿಸಿಕೊಟ್ಟರೆ ಖಂಡಿತಾ ನೀಡುವುದಾಗಿತಿಳಿಸಿದರು. ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್‍ಕುಮಾರ್ ಅವರು ಮಾತನಾಡಿದರು. ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ(ರೂಸಾ)ದ ಕಾರ್ಯನಿರ್ವಹಕ ನಿರ್ದೇಶಕರಾದ ಡಾ.ಎಸ್.ಎ.ಕೋರಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ವಿ.ವಿ.ಯ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಗಣ್ಯರನ್ನು ಸ್ವಾಗತಿಸಿದರು. ಡಾ.ಶಿವಾನಂದ ಎಸ್. ವಿರಕ್ತಮಠ ನಿರೂಪಿಸಿದರು. ರೂಸಾ ಸಂಯೋಜನಾಧಿಕಾರಿಯಾದ ಡಾ.ರಮೇಶ ನಾಯಕ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

       ಇದೇ ವೇಳೆ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯ ನೋಟ ಕೈಪಿಡಿಯನ್ನು ಉನ್ನತ ಶಿಕ್ಷಣ ಸಚಿವರು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಕನ್ನಡ ವಿ.ವಿ.ಯ ಕುಲಸಚಿವ ಡಾ.ಮಂಜುನಾಥ ಬೇವಿನಕಟ್ಟಿ, ಬಳ್ಳಾರಿ ಕೃಷ್ಣದೇವರಾಯ ವಿ.ವಿ.ಯ ಕುಲಪತಿ ಡಾ.ಎಂ.ಎಸ್.ಸುಭಾಷ್, ಮಹಿಳಾ ವಿ.ವಿ.ಯ ಕುಲಪತಿ ಡಾ.ಸಬಿಹಾ ಭೂಮಿಗೌಡ, ಗುಲ್ಬರ್ಗಾ ವಿ.ವಿ.ಯ ಕುಲಪತಿ ಡಾ.ಎಸ್.ಆರ್.ಗೋಪಾಲ್, ದಾವಣಗೆರೆ ವಿ.ವಿ.ಯ ಕುಲಪತಿಗಳು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯಗಳ ಕುಲಸಚಿವರುಗಳು, ರೂಸಾ ಅಧಿಕಾರಿಗಳು, ಬಳ್ಳಾರಿ ಜಿಲ್ಲೆಯ ನ್ಯಾಯಾಧೀಶರು, ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link