ದಾವಣಗೆರೆ :
ಸಂಸ್ಥೆಯಲ್ಲಿ ನಡೆಯುವ ವಿವಿಧ ತರಬೇತಿಗೆ ಉದ್ಯೋಗ ಅವಶ್ಯಕತೆ ಇರುವ ನಿರುದ್ಯೋಗಿಗಳು ಹಾಜರಾಗುವ ಮೂಲಕ ಕೌಶಲ್ಯ, ಸಾಮರ್ಥ್ಯ, ಗುರಿಯೊಂದಿಗೆ ಸ್ವಯಂ ಉದ್ಯೋಗಿಗಳಾಗಿ ಇತರರಿಗೂ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಹಾಗೂ ಉದ್ಯೋಗಾಧಿಕಾರಿ ರುದ್ರಣ್ಣ ಗೌಡ ಕರೆ ನೀಡಿದ್ದಾರೆ.
ಸಮೀಪದ ತೊಳಹುಣಸೆ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿರುವ 10 ದಿನಗಳ ವಸತಿಯುತ ಹೈನುಗಾರಿಕೆ ಮತ್ತು ಎರೆಹುಳುಗೊಬ್ಬರ ಸಾಕಾಣಿಕೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಮತ್ತು ಕುರಿಸಾಕಾಣಿಕೆ ಉದ್ಯೋಗವನ್ನು ಸಣ್ಣ ಆದಾಯದ ಮೂಲಕ ಪ್ರಾರಂಭಿಸಬಹುದಾಗಿದೆ.
ಸ್ವ ಉದ್ಯೋಗವನ್ನು ಪ್ರಾರಂಭಿಸಿ ಹಂತ ಹಂತವಾಗಿ ಉದ್ಯಮದಲ್ಲಿ ಯಶಸ್ಸನ್ನು ಕಾಣುವಂತವರಾಗಬೇಕು. ಹೈನುಗಾರಿಕೆ ಸಾಂಪ್ರಾದಾಯಿಕ ಉಪಕಸುಬಾಗಿದ್ದು, ಅದನ್ನು ವೃತ್ತಿಪರವಾಗಿ ಅಳವಡಿಸಿಕೊಂಡಾಗ ಮಾತ್ರ ಆರ್ಥಿಕಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಹೈನುಗಾರಿಕೆ ಉಪ ಉತ್ಪನ್ನಗಳ ಉತ್ಪಾದನೆ ಮಾರುಕಟ್ಟೆಗೆ ಹೆಚ್ಚು ಅವಶ್ಯಕವಾಗಿದೆ. ಆದ್ದರಿಂದ ಕೌಶಲ್ಯಾಧಾರಿತ ಹೈನುಗಾರಿಕೆ ಕಸುಬು ರೈತರಿಗೆ ತುಂಬಾ ಅನುಕೂಲವಾಗುತ್ತದೆ. ತರಬೇತಿಯು ಮೇ.02 ರಿಂದ ಮೇ.11 ವರೆಗೆ ನಡೆಯಲಿದೆ. ತರಬೇತಿಯಲ್ಲಿ ದಾವಣಗೆರೆ, ಜಗಳೂರು, ಹರಪನಹಳ್ಳಿ ಹಾಗೂ ಚನ್ನಗಿರಿ ತಾಲ್ಲೂಕಗಳಿಂದ ಒಟ್ಟು 23 ಶಿಬಿರಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆಂದು ಮಾಹಿತಿ ನೀಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಕಪ್ಪ ಮಾತಾನಾಡಿ, ವಿಶೇಷತೆ ಮತ್ತು ವಿಭಿನ್ನತೆಯಲ್ಲಿ ಉದ್ಯೋಗವನ್ನು ಪ್ರಾರಂಭಿಸಿದರೆ ಯಶಸ್ಸು ದೊರೆಯಲಿದೆ. ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವ ಮುಖೇನ ಶಿಬಿರಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಸಾಗಬೇಕೆಂದು ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಮತ್ತು ವ್ಯವಸ್ಥಪಾಕ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
