ಕೊಟ್ಟೂರು
ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ತಹಶೀಲ್ದಾರ ಅನಿಲ್ ಕುಮಾರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ಬರ ನಿರ್ವಾಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗೆ ನೀರು ಎಷ್ಟು ಮುಖ್ಯವೊ ಜಾನುವಾರುಗಳಿಗೂ ನೀರು ಅಷ್ಟೇ ಮುಖ್ಯ. ಜಾನುವಾರುಗಳನ್ನು ನಿರ್ಲಕ್ಷ್ಯ ಮಾಡುವಂತ್ತಿಲ್ಲ ಎಂದು ಎಚ್ಚರಿಕೆ ನೀಡಿದರು.
ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಸುಳ್ಳು ಲೆಕ್ಕ ನೀಡಿದ್ದು ಕಂಡು ಬಂದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಉದ್ಯೋಗ ಖಾತ್ರಿ ಕೆಲಸವನ್ನು ಯಾರೇ ಕೇಳಿಕೊಂಡು ಬಂದರೂ ಇಲ್ಲ ಎನ್ನುವಂತ್ತಿಲ್ಲ. ನಮಗೆ ಉದ್ಯೋಗ ಖಾತ್ರಿ ಕೆಲಸ ಕೊಡುತ್ತಿಲ್ಲ ಎಂದು ದೂರು ಬಂದರೆ ಆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಆಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ತಹಶೀಲ್ದಾರ ಅನಿಲ್ ಕುಮಾರ್, ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಕೊಳವೆಬಾವಿ ನಿರ್ಮಿಸಿಕೊಂಡಿದ್ದರೆ ತಕ್ಷಣ ಆ ಕೊಳವೆಬಾವಿಯನ್ನು ಗ್ರಾಮಪಂಚಾಯ್ತಿ ವಶಕ್ಕೆ ಪಡೆದು ಅದರಿಂದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಬೇಕೆಂದು ಆದೇಶಿದರು.
ದೂಪದಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕೆಂಚಪ್ಪ, ಗ್ರಾಮದ ಹೀರೆಹಳ್ಳದ 27 ಎಕರೆಯಲ್ಲಿ 20 ಎಕರೆ ಭೂಮಿ ಒತ್ತುವರಿಯಾಗಿದೆ. ಈ 20 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಕೆರೆ ನಿರ್ಮಿಸಿದರೆ ದೂಪದಹಳ್ಳಿ ನೀರಿನ ಸಮಸ್ಯೆ ಬಗೆಹರಿಯಲಿದೆ.
ಹಾಗೇನೆ ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರಹಳ್ಳದಲ್ಲಿ 7 ಎಕರೆ ಈಚಲಗುಂಡಿ ಭೂಮಿಯೂ ಸಹಾ ಒತ್ತುವರಿಯಾಗಿದೆ. ಇದನ್ನು ಖಾಸಗಿಯವರಿಂದ ಬಿಡಿಸಿಕೊಂಡು ಕೆರೆ ನಿರ್ಮಿಸಿದರೆ ಬೇವೂರು ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರಲ್ಲದೆ ಈ ಕುರಿತು ನನಗೆ ರಾತ್ರಿ ಸಮಯದಲ್ಲಿ ಪೋನ್ ಬೆದರಿಕೆ ಕರೆಗಳು ಬರೆತ್ತಿವೆ ಎಂದಾಗ, ತಹಶೀಲ್ದಾರ ನಿಮಗೆ ಸೂಕ್ತ ಪೋಲೀಸ್ ಬಂದೋಬಸ್ತ್ ನೀಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ ಅನಿಲ್ ಕುಮಾರ್, ಈಗ ಹೊಸ ಮಳೆ ಬರಬೇಕಿತ್ತು. ಬಂದಿಲ್ಲ. ಜೂನ್ ತಿಂಗಳು ಇನ್ನೂ ನೀರಿನ ಸಮಸ್ಯೆ ಅಧಿಕವಾಗಲಿದೆ. ಆದ್ದರಿಂದ ಗ್ರಾಮಪಂಚಾಯ್ತಿ ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಸಿದ್ದಪಡಿಸಿಕೊಳ್ಳಬೇಕೆಂದರು.
ಕೊಟ್ಟೂರು ಪಟ್ಟಣ ಇಂಜಿನೀಯರ್, ಪಿ.ಎಸ್. ಬೀರದಾರ್, ಪಟ್ಟಣದಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.