ಚಿತ್ರದುರ್ಗ
ಶಿಕ್ಷಕರು ಒಳನೋಟ ಹೊಂದಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಬೇಕು ಎಂದು ಸಿ.ಟಿ.ಇ. ಸಹನಿರ್ದೇಶಕ ಎಂ.ರೇವಣಸಿದ್ಧಪ್ಪ ಹೇಳಿದರು.
ಡಿ.ಎಸ್.ಇ.ಆರ್.ಟಿ ಮತ್ತು ಚಿತ್ರದುರ್ಗ ಡಯಟ್ ವತಿಯಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುರುಘಾ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಂಡಕ್ಷನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು ಇಂದು ಗುಣಾತ್ಮಕ ಶಿಕ್ಷಣ ಇಲ್ಲ ಎಂಬ ಭಾವನೆ ಅನೇಕರಿಂದ ವ್ಯಕ್ತವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ನವೀನ ಬೋಧನಾ ವಿಧಾನಗಳ ಮೂಲಕ ಕಲಿಕಾ ಮಟ್ಟ ಹೆಚ್ಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಉಪನ್ಯಾಸಕ ಹನುಮಂತರಾಯ ಮಾತನಾಡಿ ಶಿಕ್ಷಕರ ವೃತ್ತಿ ದಕ್ಷತೆಗೆ ತರಬೇತಿಗಳು ಅಗತ್ಯ ತರಗತಿ ಕೋಣೆಯಲ್ಲಿ ಕಂಡುಬರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರ ಮೂಲಕ ಧನಾತ್ಮಕ ಚಿಂತನೆ ಮಾಡಿಕೊಳ್ಳಬೇಕು ಎಂದರು.
ನೋಡಲ್ ಅಧಿಕಾರಿ ಎಸ್.ಎಂ.ರಮೇಶ್ ಮಾತನಾಡಿ ತರಬೇತಿ ಅವಧಿಯಲ್ಲಿ ಮಗು ಮತ್ತು ಬಾಲ್ಯ, ಲಿಂಗಸಮಾನತೆ, ರಚನಾವಾದ, ಮಕ್ಕಳ ಹಕ್ಕುಗಳು, ತಂತ್ರಜ್ಞಾನ ಬಳಕೆ, ಮೌಲ್ಯಶಿಕ್ಷಣ ಕುರಿತು ಚರ್ಚಿಸಲಾಗುವುದು ಎಂದರು. ಉಪನ್ಯಾಸಕರಾದ ಭರಮಪ್ಪ ಮೈಸೂರು, ಪಿ.ರಾಜಣ್ಣ, ಎಸ್.ಬಸವರಾಜು, ಕೆ.ಎಂ.ನಾಗರಾಜು, ಸಂಪನ್ಮೂಲ ವ್ಯಕ್ತಿಗಳಾದ ಸುಜಾತ ಅಜಿಮುಲ್ಲಾ, ಶಿವಕುಮಾರ್, ಉಮೇಶಯ್ಯ ಉಪಸ್ಥಿತರಿದ್ದರು. ಬೀದರ್, ರಾಯಚೂರು, ಬಾಗಲಕೋಟೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಒಟ್ಟು 55 ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
