ಬೆಂಗಳೂರು
ಹುತಾತ್ಮ ಸೈನಿಕರ ನೆನಪಿಗಾಗಿ ನಗರದ ಇಂದಿರಾ ಗಾಂಧಿ ಸಂಗೀತ ಕಾರಂಜಿ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ವೀರಗಲ್ಲು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.!
ಎಂಟು ವರ್ಷಗಳ ಹಿಂದೆ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಲು ವೀರಗಲ್ಲು ಸ್ಥಾಪನೆ ಕಾರ್ಯವನ್ನು ಯೋಜನೆ ಕೈಗೆತ್ತಿಕೊಂಡಿದ್ದ ರಾಜ್ಯ ಸರ್ಕಾರವು ಸ್ಥಾಪನೆ ಕಾಮಗಾರಿ ಗುತ್ತಿಗೆ ನೀಡಿ ವರ್ಷಗಳೇ ಕಳೆದರೂ ಕೆಲಸ ಮುಂದುವರೆಸದೇ ಕೈ ಕಟ್ಟಿ ಕುಳಿತಿದೆ.
ಪ್ರತಿವರ್ಷ ಇಂದಿರಾ ಗಾಂಧಿ ಸಂಗೀತ ಕಾರಂಜಿ ಆವರಣದಲ್ಲಿ ನಡೆಸುವ ಹುತಾತ್ಮ ದಿನಾಚರಣೆ ವೇಳೆ ರಾಜ್ಯ ಸರ್ಕಾರ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಲು ವೀರಗಲ್ಲು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಿದೆಯಾದರೂ ಅದು ಭರವಸೆಯಾಗಿಯೇ ಉಳಿದಿದೆ.
ವೀರಗಲ್ಲು ಪ್ರತಿಷ್ಠಾಪನೆ ಮಾಡಲು ಎಂಟು ವರ್ಷಗಳಿಂದ ದೇವನಹಳ್ಳಿಯಲ್ಲಿ ಯೋಧರ ವೀರಗಲ್ಲು ಸಿದ್ಧಪಡಿಸಲಾಗುತ್ತಿದೆ. ಇದು ಸುಮಾರು 80 ಅಡಿ ಉದ್ದ ಮತ್ತು 500 ಟನ್ ತೂಗುವ ವೀರಗಲ್ಲಾಗಿದೆ. ಈ ವೀರಗಲ್ಲಿನ ಮೇಲೆ 22600 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಲು ಸರ್ಕಾರ ನಿರ್ಧಾರ ಮಾಡಿತ್ತು. ಆದರೆ ಎಂಟು ವರ್ಷಗಳು ಕಳೆದರೂ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.
500 ಟನ್ ತೂಗುವ ಈ ವೀರಗಲ್ಲನ್ನು ಬೆಂಗಳೂರು ನಗರಕ್ಕೆ ದೇವನಹಳ್ಳಿಯಿಂದ ತರುವುದು ಕಷ್ಟವಾಗಲಿದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆದ್ದಾರಿಯ ಮೂಲಕವೇ ಈ ವೀರಗಲ್ಲನ್ನು ತೆಗೆದುಕೊಂಡು ಹೋಗಬೇಕು. ಈ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಾಗಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.ವಾಹನ ಸಂಚಾರವನ್ನು ನಿಯಂತ್ರಿಸಿ ದೊಡ್ಡದಾದ ವೀರಗಲ್ಲು ಸಾಗಿಸುವುದು ಕಷ್ಟ ಎಂದು ಕುಂಟು ನೆಪ ಹೇಳಿ ಹುತಾತ್ಮ ಸೈನಿಕರಿಗೆ ಸರ್ಕಾರ ಅವಮಾನ ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
