ಬೆಂಗಳೂರು
ರಾಜ್ಯದ 156 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಬಿಜೆಪಿ ಶಾಸಕರು ಹರಿಯಾಣದ ಐಶಾರಾಮಿ ಪಂಚತಾರಾ ಹೋಟೆಲ್ ನಲ್ಲಿ ಮಜಾ ಉಡಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ನಗರದ ಕುಮಾರ ಅತಿಥಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಕ್ರಾಂತಿ ಮುಗಿದರೂ ಬಿಜೆಪಿ ಶಾಸಕರು ತಮ್ಮ ತವರು ಕ್ಷೇತ್ರಗಳತ್ತ ಮುಖ ಮಾಡಿಲ್ಲ. ಬರಗಾಲ ಇರುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಎಲ್ಲಿದ್ದಾರೆ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಮೈತ್ರಿ ಸರ್ಕಾರಕ್ಕೆ ಐದು ವರ್ಷ ಯಾವುದೇ ತೊಂದರೆ ಇಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದು, ಇದಕ್ಕಾಗಿ ತಮ್ಮ ಶಾಸಕರನ್ನು ಹರಿಯಾಣದಲ್ಲಿ ಕೂಡಿ ಹಾಕಿದ್ದಾರೆ. ಇನ್ನೂ ಎರಡು ಮೂರು ದಿನ ಮಜಾ ಮಾಡಲಿ ಎಂದು ಟೀಕಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲಾ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ನಮ್ಮ ಸರ್ಕಾರದ ಉರುಳುವುದಿಲ್ಲ. ಅವರ ಷಡ್ಯಂತ್ರ ಈಗ ಬಹಿರಂಗಗೊಂಡಿದೆ, ಮುಂದಿನ ದಿನದಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂಬುದು ಗೊತ್ತಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/dinesh-gunduraoo.gif)