ತುರುವೇಕೆರೆ:
ಹಳ್ಳಿಗರಿಗೆ ನೂರು ದಿನಗಳ ಉದ್ಯೋಗ ಖಾತ್ರಿಯೊಂದಿಗೆ ಕೃಷಿಪೂರಕದಂತಹ ವೈಯಕ್ತಿಕ ಕೆಲಸಗಳನ್ನು ರೈತರಿಗೆ ಮಾಡಿಕೊಳ್ಳುಬಹುದಾಗಿದೆ ಎಂದು ಜಿಪಂ ಸದಸ್ಯೆ ರೇಣುಕಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಮಾದಿಹಳ್ಳಿ ಗ್ರಾಪಂ ವ್ಯಾಪ್ತಿಯ ಕಳ್ಳನಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಹಾಗೂ ನರೇಗಾ ಉದ್ಯೋಗಖಾತರಿ ಯೋಜನೆಯಡಿ 19-20ನೇ ಸಾಲಿನ ಕ್ರಿಯಾಯೋಜನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಉದ್ಯೋಗಖಾತ್ರಿ ಗ್ರಾಮೀಣರಿಗೆ ಕೃಷಿಬದುಕಿನ ನಡುವೆ ಬಿಡುವಿನ ವೇಳೆಯಲ್ಲಿ ಸರ್ಕಾರವೇ ವಾರ್ಷಿಕ 100 ದಿನಗಳ ಕೂಲಿಯನ್ನು ನೀಡಿ ಅವರ ಆರ್ಥಿಕ ಸದೃಡತೆಯ ಜೊತೆಗೆ ಗ್ರಾಮಗಳ ಅಭಿವೃದ್ದಿಯ ಉದ್ದೇಶಹೊಂದಿದೆ ಎಂದರು.
ತಾಪಂ ಇಒ ಗಂಗಾಧಾರ್ ಮಾತನಾಡಿ ಹಳ್ಳಿಗರು ನಿಮ್ಮ ಕೃಷಿ ಜಮೀನುಗಳಲ್ಲಿ ಹುದಿ, ಬದು, ಸಮದಟ್ಟು , ಕೃಷಿಹೊಂಡ, ಕೊಳವೆಬಾವಿಗಳಿಗೆ ಇಂಗುಗುಂಡಿ, ಕೊಟ್ಟಿಗೆ ನಿರ್ಮಾಣ, ಎರೆಹುಳು ಘಟಕಗಳು ಸೇರಿದಂತೆ ಹತ್ತು ಬಗೆಯ ಕಾಮಗಾರಿಗಳನ್ನು ನೀವೇ ಮಾಡಿಕೊಳ್ಳಬಹುದು. ಈ ದಿಸೆಯಲ್ಲಿ ಗ್ರಾಮೀಣರು ಉದ್ಯೋಗ ಖಾತರಿ ನೊಂದಣಿಯೊಂದಿಗೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆ ಪ್ರಹ್ಲಾದ್ ಮಾತನಾಡಿ ಚಿಕ್ಕೋನಹಳ್ಳಿಗ್ರಾಮ ದೇಶದ ಅತ್ಯುನ್ನತ ತಳಿಯಾದ ಬಯೋಲ್ಟಿನ್ ರೇಷ್ಮೆತಳಿ ಬೆಳೆಯುವುದರೊಂದಿಗೆ ರಾಜ್ಯ, ಅಂತರ್ ರಾಜ್ಯದಲ್ಲಿ ಪ್ರಖ್ಯಾತಿ ಹೊಂದಿದೆ. ಇಲ್ಲಿಯ ಶೇ 90 ರಷ್ಟು ಮಂದಿ ರೇಷ್ಮೆ ಬೆಳೆಯನ್ನು ಅವಲಂಬಿಸಿದ್ದು, ಸರ್ಕಾರ ಉಪ್ಪುನೇರಳೆ ಬೆಳೆಯುವ ಹಂತದಿಂದ ಪ್ರತಿ ಹಂತದಲ್ಲಿ ಪೂರಕ ನೆರವು ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕಿ ಮಂಜಮ್ಮ, ಎಇ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಮಾಳಮ್ಮ, ಸದಸ್ಯರಾದ ಶಿವಶಂಕರ್, ಮೋಹನ್, ಕವಿತ, ಮಂಜುನಾಥ್, ಪುಷ್ಪಾ, ಗಂಗಮ್ಮ, ಜಗದೀಶ್, ಬಾಗ್ಯಮ್ಮ. ಶಶಿಕಲಾ, ಗೌರಿಶಂಕರ್, ಹೇಮಾವತಿ, ಮೀನಾ ಸೇರಿದಂತೆ ಹಲವು ಗ್ರಾಮಸ್ಥರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ