ತಿಪಟೂರು:
ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ| ಪಿಡಿಓ ಬದಲಾವಣೆಗೆ ಸದಸ್ಯರ ಆಗ್ರಹ
ತಾಲೂಕಿನಲ್ಲಿ ದಿನನಿತ್ಯ ಒಂದೊಂದೆ ಗ್ರಾಪಂಗಳ ಹಗರಣಗಳು ಹೊರಬರುತ್ತಿದ್ದು, ಸೋಮವಾರ ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಅವ್ಯವಹಾರ, ಮಂಗಳವಾರ ಮತ್ತಿಹಳ್ಳಿ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಲು ಲಂಚ ಕೊಡಬೇಕಾದ ಪರಿಸ್ಥಿತಿಯಂತಹ ಜನ ವಿರೋಧಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಗ್ರಾಪಂಗಳಲ್ಲಿ ಪಿಡಿಓ ತೆಗೆದುಹಾಕಿ ಗ್ರಾಪಂ ಉಳಿಸಿ ಅಭಿಯಾನ ಪ್ರಾರಂಭವಾಗುವಂತೆ ಕಂಡು ಬರುತ್ತಿದೆ.
ಸದಸ್ಯರ ಅರ್ಜಿಗಳು ಮೂಲೆಗೆ : ಸದಸ್ಯರಾಗಿ ಆಯ್ಕೆಯಾದ ಎರಡೂವರೆ ವರ್ಷದಿಂದ ಪಿಡಿಓ ಅವರನ್ನು ನೊಡುತ್ತಿದ್ದೇವೆ. ಮೀಟಿಂಗ್ನಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಅರ್ಜಿ ಕೊಟ್ಟರೆ, ಅವುಗಳನ್ನು ಪೆಂಡಿಕಟ್ಟಿ ಮೂಲೆಗೆ ಹಾಕಿದ್ದಾರೆ, ಮತ್ತಿಹಳ್ಳಿ ಗ್ರಾಪಂಯಲ್ಲಿ ಸ್ವಚ್ಛಭಾರತ ಎಂಬುದು ಮರಿಚಿಕೆಯಾಗಿದ್ದು, ಎಲ್ಲಿ ನೋಡಿದರೂ ಗಲೀಜು ಕಾಣುತ್ತಿದೆ. ಪಿಡಿಓ ನಮ್ಮ ಪಂಚಾಯಿತಿಯನ್ನು ಒಂದು ಗಲೀಜು ಪ್ರದೇಶವಾಗಿ ಮಾರ್ಪಡಿಸಿದ್ದಾರೆಂದು ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.
ಮೂಲಭೂತ ಸೌಕರ್ಯಗಳು ಮರೀಚಿಕೆ : ಮಡೆನೂರು ಭೋವಿ ಕಾಲೋನಿಯಲ್ಲಿ ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಚರಂಡಿಗಳನ್ನು ಸ್ವಚ್ಛ ಮಾಡದೇ ಗಬ್ಬು ವಾಸನೆ ಹೊಡೆಯುತ್ತಿದ್ದು, ದುರ್ನಾತದಿಂದ ಜನರಿಗೆ ಊಟ ಸೇರದಂತಾಗಿದೆ. ಈಗಾಗಲೇ ಕೊರೊನಾ ಹಾವಳಿಯಿಂದ ಜನರು ಸಾಕಷ್ಟು ಆರೋಗ್ಯ ಸಮಸ್ಯೆ ಅನುಭವಿಸಿದ್ದು, ಸದ್ಯ ಮಳೆಗಾಲವಾದ್ದರಿಂದ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳಿಗೆ ಆವಾಸ ಸ್ಥಾನವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದರೂ ಪಿಡಿಓ ಮಾತ್ರ ಗ್ರಾಪಂ ಅಭಿವೃದ್ಧಿಗೆ ಶ್ರಮಿಸದೆ ತಮ್ಮ ವೈಯಕ್ತಿಕ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.
ಇಂತಹ ಭ್ರಷ್ಟ ಅಧಿಕಾರಿಯನ್ನು ನಾವೆಂದು ನೋಡಿಲ್ಲ, ಸದಸ್ಯರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಶೀಘ್ರ ಪಿಡಿಓ ವರ್ಗಾವಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಪಂಗೆ ಬೀಗ ಹಾಕುತ್ತೇವೆಂದು ಪ್ರತಿಭಟನಾ ನಿರತ ಸದಸ್ಯರುಗಳು ಆಗ್ರಹಿಸಿದ್ದಾರೆ.
ಗ್ರಾಪಂ ಸದಸ್ಯರುಗಳೂ ಗ್ರಾಪಂ ಅಭಿವೃದ್ಧಿಗೆ ಸಹಕರಿಸಬೇಕು, ಅದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲ್ಲವೆಂದರೆ ಹೇಗೆ? ಸದಸ್ಯರು ಗ್ರಾಪಂಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಮಾಡವಂತಿಲ್ಲ. ಸದಸ್ಯರ ಹಿತಾಸಕ್ತಿ ಇರುವಂತಹ ಕಾಮಗಾರಿ ಬಿಲ್ಗಳನ್ನು ತಡೆಯಲಾಗಿದೆ ಹಾಗಾಗಿ ಸದಸ್ಯರು ಪಿಡಿಓ ಸಹಕರಿಸುತ್ತಿಲ್ಲ ಎನ್ನುತ್ತಿದ್ದಾರೆ. ಸದಸ್ಯರು ತಂದ ಬಿಲ್ಗಳಿಗೆಲ್ಲಾ ನಾನು ಸಹಿ ಹಾಕಿದರೆ ಉತ್ತಮ ಪಿಡಿಓ, ಸಹಿ ಹಾಕದಿದ್ದರೆ ಭ್ರಷ್ಟ ಪಿಡಿಓ ಇದು ಯಾವ ನ್ಯಾಯ?
-ಪಿಡಿಓ, ಮತ್ತಿಹಳ್ಳಿ ಗ್ರಾಪಂ
ದಾಖಲೆ ಹಾಜರು ಪಡಿಸುತ್ತೇವೆ : ತಾಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಪಂಯು ತಾಲೂಕಿನಲ್ಲೆ ಅಧಿಕÀ ಆದಾಯವನ್ನು ತರುವ ಪಂಚಾಯಿತಿಗಳಲ್ಲಿ ಒಂದಾಗಿದೆ. ಈ ಪಂಚಾಯಿತಿಯಲ್ಲಿ ಒಂದು ಇ-ಸ್ವತ್ತನ್ನು ಮಾಡಿಕೊಡಲು 25 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ. ಕೇವಲ ನಗರ ಪ್ರದೇಶದ ಸ್ವತ್ತುಗಳಿಗಷ್ಟೆ ಇ-ಸ್ವತ್ತು ಮಾಡಿಕೊಳ್ಳುತ್ತಿದ್ದು, ಇದಕ್ಕೆ ಬೇಕಾದ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ ಎಂದು ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಚಿನ್ನಸ್ವಾಮಿಯವರು ತಿಳಿಸಿದ್ದು, ಪಿಡಿಓ ಬದಲಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಬಗ್ಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
