ಸಿಎಂ ಸ್ಥಾನ ಕುರಿತ ಹೇಳಿಕೆ : ನನ್ನ ಹೇಳಿಕೆ ತಿರುಚಲಾಗಿದೆ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು:

      ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವಾಗ ನಾನು ನೀಡಿರುವ ಹೇಳಿಕೆಯು ತಪ್ಪಾಗಿ ಅರ್ಥೈಸಿ ವರದಿಯಾಗುತ್ತಿರುವುದು ಈಗಷ್ಟೇ ನನ್ನ ಗಮನಕ್ಕೆ ಬಂದಿರುವ ಕಾರಣ ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

     ಅದು ಸಿಎಂ ಅವರೇ ಹೇಳಿದಾರೆ. ನಾನೂ ಹೇಳಿದ್ದೀನಲ್ಲಾ ಸರ್, ನಾಲ್ಕು ಜನ ಕುತ್ಕೊಂಡು ಚರ್ಚೆ ಮಾಡಿದಾರೆ ದೆಹಲಿಯಲ್ಲಿ, ಆ ನಾಲ್ಕು ಜನ ಹೊರತುಪಡಿಸಿ ಬೇರೆ ಯಾರೇ ಮಾತಾಡಿದ್ರೂ ಅದಕ್ಕೆ ಬೆಲೆಯಿಲ್ಲ. ಹೈಕಮಾಂಡ್ ಹೇಳಬೇಕಲ್ವಾ? ನಾಳೆ ಹೈಕಮಾಂಡ್ ನೀವೇ ಮುಖ್ಯಮಂತ್ರಿ ಅಂದ್ರೆ ನಾನು ಯೆಸ್ ಅಂತೀನಿ.

     ಹೈಕಮಾಂಡ್ ಯಾರನ್ನೇ ಸಿಎಂ ಮಾಡುತ್ತೇವೆ ಎಂದರೂ ನಮ್ಮ ಒಪ್ಪಿಗೆ ಇರುತ್ತದೆ, ಆ ವರದಿಗಾರನನ್ನೇ ಸಿಎಂ ಮಾಡುತ್ತೇವೆ ಎಂದು ಹೈಕಮಾಂಡ್ ಹೇಳಿದರೆ, ನಾನು ಅದಕ್ಕೂ ಎಸ್ ಅನ್ನುತ್ತೇನೆ ಎನ್ನುವುದಷ್ಟೇ ನನ್ನ ಮಾತಿನ ಅರ್ಥ.

    ನಾನು ನನಗೆ ನೀಡಿದ ಇಲಾಖೆಗಳ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ಶ್ರದ್ದಾಪೂರ್ವಕವಾಗಿ ನಿರ್ವಹಿಸುವುದರ ಬಗ್ಗೆ ಗಮನಿಸುತ್ತಿದ್ದೇನೆಯೇ ಹೊರತು ಇನ್ಯಾವುದೇ ಹುದ್ದೆಗಳ ಮೇಲೆ ನನ್ನ ಗಮನವಿಲ್ಲ, ಯೋಜನೆಗಳ ಮೂಲಕ ಜನರನ್ನು ತಲುಪುವುದು, ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದ ಮೇಲೆ ಸದಾ ನನ್ನ ಗಮನವನ್ನು ಕೇಂದ್ರೀಕರಿಸಿರುತ್ತೇನೆ.

    ಯಾವುದೇ ಹುದ್ದೆಗಳನ್ನು ಜನರ ಅಪೇಕ್ಷೆ, ಆಶೀರ್ವಾದದಿಂದ ಪಡೆಯಬಹುದು ಹೊರತು ಲಾಭಿಯಿಂದ ಪಡೆಯಲಾಗದು,  ನಮ್ಮ ರಾಜಕೀಯ ಬೆಳವಣಿಗೆ ಜನರ ನಂಬಿಕೆಯ ಮೇಲೆ ನಿಂತಿದೆ ಎಂದು ನಂಬಿಕೊಂಡು ಕೆಲಸ ಮಾಡುತ್ತಿದ್ದೇನೆ.

    ಈ ಘಟನೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡುತ್ತಿರುವುದು, ಸುದ್ದಿಯನ್ನು ಪರಿಶೀಲಿಸದೇ ತಿರುಚಿ ವರದಿ ಮಾಡುತ್ತಿರುವುದು, ಘಟನೆಯನ್ನು ಘಟನೆ ಎಂದು ವರದಿ ಮಾಡುವುದರ ಬದಲು, ನಾನು ಹೇಳಿಲ್ಲದ ಪದಗಳನ್ನೂ ಸೇರಿಸಿ “ನಾಳೆ ನಾನೇ ಸಿಎಂ” ಎಂಬ ಶೀರ್ಷಿಕೆಯಲ್ಲಾ ಸೇರಿಸಿ ವರದಿ ಮಾಡಲಾಗುತ್ತಿದೆ, ಇವೆಲ್ಲಾ ಕನ್ನಡ ಪತ್ರಿಕೋದ್ಯಮಕ್ಕೆ ಒಳ್ಳೆಯ ನಿದರ್ಶನವಲ್ಲಾ ಎಂಬುದು ನನ್ನ ನಂಬಿಕೆಯಾಗಿದೆ ಎಂದು ತಿಳಿಸಲು ಬಯಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap