ಚಂಡೀಗಢ:
ಆಪರೇಷನ್ ಸಿಂದೂರದ ಬಳಿಕ ಪ್ರಧಾನಿ ಮೋದಿ ಅವರು ಪಂಜಾಬ್ನ ಆದಂಪುರ ವಾಯು ನೆಲೆಗೆ ಮಂಗಳವಾರ ಭೇಟಿ ನೀಡಿದ್ದಾರೆ. ಅವರು ಸೈನಿಕರ ಜೊತೆ ಮಾತುಕತೆ ನಡೆಸಿದರು. ಇದೀಗ ಯೋಧರನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ವಾಯು, ಭೂ, ನೌಕಾ ಹಾಗೂ ಗಡಿ ಭದ್ರತಾ ಪಡೆಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಆಪರೇಷನ್ ಸಿಂದೂರದ ಮೂಲಕ ಕೋಟ್ಯಾಂತರ ಭಾರತೀಯರ ಗೌರವವನ್ನು ನೀವು ಹೆಚ್ಚಿಸಿದ್ದೀರಿ ಎಂದು ಮೋದಿ ಹೇಳಿದರು. ಇಡೀ ದೇಶ ಸೈನಿಕರಿಗೆ ಕೃತ್ಞರಾಗಿದ್ದಾರೆ. ಆಪರೇಷನ್ ಸಿಂದೂರದ ಪ್ರತಿಧ್ವನಿ ಇಡೀ ಜಗತ್ತನಲ್ಲಿ ಮೊಳಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ್ ಮಾತಾ ಕಿ ಜೈ ಎಂಬುದು ಬರೀ ಘೋಷಣೆ ಅಲ್ಲ. ಅದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿರುವ ಪ್ರತಿಯೊಬ್ಬ ಸೈನಿಕನ ಶಪಥ ಎಂದು ಮೋದಿ ಹೇಳಿದರು. ನೀವೆಲ್ಲರೂ ನಿಮ್ಮ ಗುರಿಯನ್ನು ಪರಿಪೂರ್ಣತೆಯಿಂದ ತಲುಪಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ, ಭಯೋತ್ಪಾದಕ ಶಿಬಿರಗಳು ಮತ್ತು ಅವರ ವಾಯುನೆಲೆಗಳು ಮಾತ್ರ ನಾಶವಾಗಲಿಲ್ಲ, ಬದಲಿಗೆ ಅವರ ದುಷ್ಟತನ ಕೂಡ ನಾಶವಾಗಿದೆ. ಉಗ್ರ ಪೋಷಕರಿಗೆ ನಾವು ಸರಿಯಾದ ಪಾಠವನ್ನು ಕಲಿಸಿದ್ದೇವೆ. ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಸೌಭಾಗ್ಯ ಎಂದು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಇಂದು ಬೆಳಿಗ್ಗೆ ನನ್ನ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ಭಾರತವು ಗೌತಮ ಬುದ್ಧ ಹಾಗೂ ಗುರು ಗೋವಿಂದ ಸಿಂಗ್ ಅವರ ನಾಡು. ನಮ್ಮ ಹೆಣ್ಣು ಮಕ್ಕಳ ಸಿಂದೂರ ಅಳಿಸಿದವರಿಗೆ ಆಪರೇಷನ್ ಸಿಂದೂರ್ ಮೂಲಕ ಉತ್ತರ ನೀಡಿದ್ದೇವೆ. ಆಪರೇಷನ್ ಸಿಂದೂರ್ ಭಾರತದ ನೀತಿ, ಅದರ ಉದ್ದೇಶಗಳು ಮತ್ತು ಅದರ ನಿರ್ಣಾಯಕ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ. “ಪ್ರಮುಖ ಭಯೋತ್ಪಾದಕ ಕೇಂದ್ರಗಳು ನಾಶವಾಗಿವೆ. ಒಂಬತ್ತಕ್ಕೂ ಹೆಚ್ಚು ಕೇಂದ್ರಗಳು ನಾಶವಾಗಿವೆ ಮತ್ತು 100 ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಈಗ ಭಯೋತ್ಪಾದಕರು ಭಾರತವನ್ನು ನೋಡಲು ಧೈರ್ಯ ಮಾಡಿದರೆ ಅವರು ಸಂಪೂರ್ಣವಾಗಿ ನಾಶವಾಗುತ್ತಾರೆ ಎಂದು ಅರ್ಥಮಾಡಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಭಾರತದ ನೆಲದಲ್ಲಿ ಭಯೋತ್ಪಾದನೆ ನಡೆಸುವವರಿಗೆ ನಮ್ಮ ಸೇನೆ ಪ್ರತ್ಯುತ್ತರವನ್ನು ನೀಡಿದೆ. ನಮ್ಮ ಬಳಿ ಅತ್ಯಾಧುನಿಕ ಆಯುಧಗಳಿವೆ. ಭಾರತ ಯಾವುದೇ ಪರಮಾಣು ಬ್ಲ್ಯಾಕ್ಮೇಲ್ ಅನ್ನು ಸಹಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
