ಶಿರಾ :
a
ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಸಂಬಂಧವಾಗಿ ಶಿರಾ ಶಾಸಕ ರಾಜೇಶ್ಗೌಡ ಅವರ ಹರಿಯಲಿರುವ ನೀರು ಯಡಿಯೂರಪ್ಪ ಅವರು ನೀಡಿರುವ ಭಿಕ್ಷೆ ಎಂಬ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೀಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದ್ದು ನಾವು ಮದಲೂರು ಕೆರೆಗೆ ಪಡೆಯುವ ನೀರು ಎಂದಿಗೂ ಭಿಕ್ಷೆಯಾಗಬಾರದು, ಅದು ನಮ್ಮ ಹಕ್ಕಾಗಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ನಗರದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಜನತಂತ್ರ ವ್ಯವಸ್ಥೆಯಲ್ಲಿ ನಾನಾಗಲಿ ಇಲ್ಲವೇ ಇನ್ನೊಬ್ಬರಾಗಲಿ ಯಾವ ಶಾಸಕರೂ ಶಾಶ್ವತವಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡು ಕೂರಲು ಸಾಧ್ಯವಿಲ್ಲ. ಬದಲಾದ ಸನ್ನಿವೇಶದ ಕಾಲಚಕ್ರದಡಿಯಲ್ಲಿ ಎಲ್ಲರೂ ಬದಲಾವಣೆಯ ಗಾಳಿಗೆ ಸಿಲುಕಲೇಬೇಕು ಎಂದರು.
ದಸರಾ ಹಬ್ಬದ ದಿನದಂದು ಆನೆಯ ಮೇಲೆ ನಡೆಸಲಾಗುವ ದಸರಾ ಅಂಬಾರಿಯೂ ನನಗೆ ಗೊತ್ತು, ಅದೇ ರೀತಿಯಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ನಡೆಸಲಾಗುವ ಕುರಿಯನ್ನು ತುಂಡರಿಸುವ ಹೊಸ ತಡಕಿನ ಹಬ್ಬವೂ ಗೊತ್ತು. ಮದಲೂರು ಕೆರೆಗೆ ಹರಿಸುವ ನೀರನ್ನು ಯಡಿಯೂರಪ್ಪ ಅವರು ನೀಡಿದ ಭಿಕ್ಷೆ ಎಂದು ಹೇಳಿಕೊಂಡು ಕ್ಷೇತ್ರದ ಜನರನ್ನು ಶಾಸಕರು ಹರಕೆಯ ಕುರಿಗಳನ್ನಾಗಿ ಮಾಡು ತ್ತಿದ್ದಾರೆ ಎಂದು ಕುಟುಕಿದರು.
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ವೀರೇಂದ್ರ ಪಾಟೀಲ್ರಂತಹ ರಾಜಕೀಯ ಮುತ್ಸದ್ಧಿಗಳು ಓದಿದ ಶಾಲೆಯಲ್ಲಿ ಕಲಿತವ ನಾನು. ಇವರ ನಾಯಕತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಈಗಿನ ಶಾಸಕರು ನನಗೆ ನೀರಿನ ಪಾಠ ಹೇಳಿಕೊಡುವ ಅಗತ್ಯವಿಲ್ಲ. ಮದಲೂರು ಕೆರೆಗೆ ಹೇಮಾವತಿ ಹರಿಸುವ ಸಂಬಂಧ ನೀರನ್ನು ಭಿಕ್ಷೆ ಎಂದು ಕೊಡುವ ಬದಲು ನೀರಿನ ಹಕ್ಕನ್ನು ಚಲಾಯಿಸುವ ಕೆಲಸ ಮಾಡಿ ಎಂದು ಜಯಚಂದ್ರ ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
