ಶೇಂಗಾ ಬೆಳೆಗೆ ಬೆಂಕಿ ರೋಗ : ವಿಮೆ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಬರಗೂರು :

      ಶಿರಾ ರೈತರ ಜೀವನಾಡಿ ಶೇಂಗಾ ಬೆಳೆಗೆ ಮಳೆಯ ಅಭಾವ, ಹವಾಮಾನ ವೈಪರೀತ್ಯ ಕಾರಣದಿಂದ ಬೆಂಕಿ ಸೀಡೆ (ಸುರಳಿ ಪಾಚಿ) ರೋಗ ತಗಲಿದೆ. ಶೇಂಗಾ ಬೆಳೆಗೆ ಈಗಾಗಲೆ ಸಾವಿರಾರು ರೈತರು ಬೆಳೆವಿಮೆ ಹಣ ಕಟ್ಟಿದ್ದು, ವಿಮೆ ಕಟ್ಟದ ಬಡ ರೈತರು ಕೂಡ ಶೇಂಗಾ ಬಿತ್ತನೆ ಮಾಡಿ ನಷ್ಟ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಳೆ ವಿಮೆ ನೀಡುವುದರ ಜೊತೆಗೆ, ಬೆಳೆ ನಷ್ಟ ಪರಿಹಾರ ನೀಡುವಂತೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಒತ್ತಾಯಿಸಿದ್ದಾರೆ.

      ಅವರು ಶಿರಾ ತಾಲ್ಲೂಕಿನ ಕ್ಯಾದಿಗುಂಟೆ ವ್ಯಾಪ್ತಿಯಲ್ಲಿ ಬೆಂಕಿ ಸೀಡೆ ( ಸುರಳಿ ಪಾಚಿ) ರೋಗಕ್ಕೆ ಒಳಗಾಗಿರುವ ಶೇಂಗಾ ತಾಟುಗಳಿಗೆ ರೈತರೊಂದಿಗೆ ಭೇಟಿ ನೀಡಿ ಮಾತನಾಡಿದರು. ಶಿರಾದಲ್ಲಿ ಬಹುತೇಕ ರೈತರು ಶೇಂಗಾ ಬೆಳೆಯುತ್ತಾರೆ. ಆದರೆ ವಿಮಾ ಕಂಪನಿಗಳು ಅತಿ ಹೆಚ್ಚು ಬಿತ್ತನೆಯಾದ ಶೇಂಗಾಗೆ ವಿಮೆ ಹಣ ನೀಡುವುದಿಲ್ಲ, ಬದಲಿಗೆ ತೊಗರಿ ಬೆಳೆಗೆ ವಿಮೆ ಹಣ ಮಂಜೂರು ಮಾಡುವ ಮೂಲಕ ವಿಮಾ ಕಂಪನಿಗಳು ದ್ವಿಮುಖ ನೀತಿ ಅನುಸರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಗಳ ಬಗ್ಗೆ ವಿರ್ಮಶೆ ನಡೆಸಿ, ವಿಮಾ ಹಣ ನೀಡಬೇಕು. ಇದಲ್ಲದೆ ಬಡ ರೈತರು ಸಹ ಶೇಂಗಾ ಬಿತ್ತನೆ ಮಾಡಿದ್ದಾರೆ. ಇವರು ಹಣ ಇಲ್ಲದ ಕಾರಣ ವಿಮೆ ಹಣ ಕಟ್ಟಿಲ್ಲ. ಅಂತಹ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ನೀಡಬೇಕು. ನಿರ್ಲಕ್ಷ್ಯ ದೋರಣೆ ಅನುಸರಿಸಿದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

      ಹೊಸಹಳ್ಳಿ ಗ್ರಾಪಂ ಸದಸ್ಯ ನಾಗೇಶ್ ಮಾತನಾಡಿ, ಶೇಂಗಾ ಬೆಳೆಯನ್ನು ನಂಬಿ ಕೊಂಡು ಸಾವಿರಾರು ರೈತರು ಜೀವನಕಟ್ಟಿ ಕೊಂಡಿದ್ದಾರೆ. ಒಂದು ಕ್ವಿಂಟಾಲ್ ಶೇಂಗಾ ಬಿತ್ತನೆ ಮಾಡಿ ಶೇಂಗಾ ಕಾಯಿಯಾಗಿ ಮನೆಗೆ ಬರಲು 35 ರಿಂದ 40 ಸಾವಿರ ರೂಪಾಯಿ ಖರ್ಚಾಗುತ್ತದೆ. ಇಂತಹ ರೋಗ ಬಂದರೆ ಹಾಕಿದ ಬಂಡವಾಳ ಕೂಡ ರೈತರ ಕೈ ಸೇರುವುದಿಲ್ಲ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.

      ಗ್ರಾಪಂ ಮಾಜಿ ಸದಸ್ಯ ಉಗ್ರನರಸಿಂಹಯ್ಯ, ಮುಖಂಡರಾದ ಎಸ್.ಕೃಷ್ಣಪ್ಪ, ಕೆ.ಎಲ್.ಪಾಂಡುರಂಗಯ್ಯ, ವೀರಕ್ಯಾತಪ್ಪ, ಶಿವಣ್ಣ, ಆರ್.ಗೌಡಪ್ಪ, ಓಂಕಾರಪ್ಪ, ಶ್ರೀನಿವಾಸ, ವಿಶ್ವನಾಥ್, ಮನುವಾಚಾರ್, ಶ್ರೀರಂಗಪ್ಪ, ಟಿ.ಪಾಂಡುರಂಗಪ್ಪ, ತಿಮ್ಮಣ್ಣ, ಮಂಜುನಾಥ್ ಸೇರಿದಂತೆ ಹಲವಾರು ರೈತರು ಇದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link