ರಾಮನಗರ:
ಲೋಕಸಭಾ ಉಪ ಚುನಾವಣೆಗೆ ಇನ್ನೇನು ಎರಡು ದಿನ ಬಾಕಿ ಇದ್ದಾಗ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ತೆಕ್ಕೆಗೆ ಸೇರಿಕೊಂಡಿದ್ದಾರೆ. ಅಭ್ಯರ್ಥಿ ಕೈಕೊಟ್ಟರೇನಂತೆ ಕಾರ್ಯಕರ್ತರು ತಮ್ಮ ಛಲ ಬಿಟ್ಟಿಲ್ಲ, ಅಭ್ಯರ್ಥಿ ಇಲ್ಲದಿದ್ದರೂ ಬಿಜೆಪಿ ಪರ ಪ್ರಚಾರವನ್ನು ಮುಂದುವರೆಸಿದ್ದಾರೆ.
ನಿನ್ನೆಗೆ ಬಹಿರಂಗ ಪ್ರಚಾರ ಅಂತ್ಯವಾಗಿರುವ ಕಾರಣ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹೊಸ ಕರಪತ್ರಗಳನ್ನು ಹಿಡಿದು ಮನೆ-ಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಗೆ ಬೇಡ ಬಿಜೆಪಿ ಪಕ್ಷವನ್ನು ನೋಡಿ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಅಭ್ಯರ್ಥಿ ಎಲ್.ಚಂದ್ರಶೇಖರ್ ಕೈಕೊಡುತ್ತಿದ್ದಂತೆ ರಾತ್ರೋರಾತ್ರಿ ಹೊಸ ಕರಪತ್ರಗಳನ್ನು ಅಚ್ಚು ಮಾಡಿಸಿರುವ ರಾಮನಗರ ಬಿಜೆಪಿ, ಅಭ್ಯರ್ಥಿ ಚಿತ್ರದ ಜಾಗದಲ್ಲಿ ಬಿಜೆಪಿಯ ಚಿಹ್ನೆ ಕಮಲದ ಚಿಹ್ನೆ, ಅಭ್ಯರ್ಥಿ ಹೆಸರಿನ ಜಾಗದಲ್ಲಿ ‘ದೇಶ ಮೊದಲು’ ಎಂದು ಮುದ್ರಿಸಿ ಮತ ಕೇಳುತ್ತಿದೆ.
ಇನ್ನು ಕೈಕೊಟ್ಟ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಮೇಲೆ ತೀವ್ರ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರು ಚಂದ್ರಶೇಖರ್ ಅವರ ಪ್ರತಿಕೃತಿ ದಹಿಸಿ, ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಅಣಕು ಶವಯಾತ್ರೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
