ಬೆಂಗಳೂರು :
ಒಂದು ಕಡೆ ಜಾತಿಗಣತಿ ವರದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದರೆ ಇನ್ನೊಂದು ಕಡೆ ದೇಶಾದ್ಯಂತ ಜಾತಿಗಣತಿ ವರದಿ ನಡೆದು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನೊಂದೆಡೆ ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಇದೇ 24 ಶುಕ್ರವಾರದಂದು ಹಿಂದುಳಿದ ವರ್ಗಗಳ ಆಯೋಗ ಜಾತಿ ಜನಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಈ ಜಾತಿ ಜನಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಎಚ್ಚರಿಸಿದೆ ಎಂದು ತಿಳಿದು ಬಂದಿದೆ.
ಸಮುದಾಯವಾರು ಭಿನ್ನಾಭಿಪ್ರಾಯ, ಸಂಘರ್ಷಕ್ಕೂ ಕಾರಣವಾಗಬಹುದು. ಒಬಿಸಿ ವರ್ಗಗಳು ಕಾಂಗ್ರೆಸ್ ಕಡೆ ಮುಖ ಮಾಡಬಹುದು. ಆದರೆ ಲಿಂಗಾಯತ ಸಮುದಾಯ ವಿಮುಖರಾಗಬಹುದು. ಒಕ್ಕಲಿಗ ಸಮುದಾಯ ಕೂಡ ಧ್ರುವೀಕರಣ ಆಗಬಹುದು. ಗ್ಯಾರಂಟಿಗಳ ಲಾಭ ದಕ್ಕದೇ ಹೋಗಬಹುದು ಎಂದು ಗುಪ್ತಚರ ವರದಿ ತಿಳಿಸಿದೆ ಎನ್ನಲಾಗಿದೆ.
ಇದರ ಸಾಧಕ ಭಾದಕಗಳ ವಿವರಗಳನ್ನು ಗುಪ್ತಚರ ಇಲಾಖೆ ಸಿಎಂಗೆ ವರದಿ ಸಲ್ಲಿಸಿದೆ. ಇದರಲ್ಲಿ ವರದಿಗೆ ಪ್ರಬಲ ಲಿಂಗಾಯತ, ಒಕ್ಕಲಿಗ, ಸಮುದಾಯಗಳಿಂದ ತೀವ್ರ ವಿರೋಧ ಬರಲಿದೆ. ಪ್ರತಿಭಟನೆಗಳು ತೀವ್ರಗೊಳ್ಳಲಿದ್ದು, ಇದಕ್ಕೆ ಕೆಲ ಕಾಂಗ್ರೆಸ್ ಮುಖಂಡರೂ ಕೈಜೋಡಿಸಬಹುದು. ಪಕ್ಷದೊಳಗೂ ಬಿರುಕು ಸೃಷ್ಟಿಯಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ