ತುಮಕೂರು:
ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಒಂದು ಅಸ್ಮಿತೆ ಇದೆ. ಈ ಅಸ್ಮಿತೆಯನ್ನು ಉಳಿಸಲು ಲೇಖಕಿ ಹಾಗೂ ಹೋರಾಟಗಾರ್ತಿ ಬಿ.ಸಿ.ಶೈಲಾನಾಗರಾಜ್ ಅವರನ್ನು ಸಾಹಿತ್ಯ ಬಂಧುಗಳು, ಸಾಹಿತ್ಯ ಪರಿಷತ್ ಮತದಾರರು ಬೆಂಬಲಿಸಬೇಕೆಂದು ಜಿಲ್ಲಾ ಲೇಖಕಿಯರ ಸಂಘ ಮನವಿ ಮಾಡಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಅವರು ಸಾಹಿತ್ಯ ಪರಿಷತ್ ರಾಜಕೀಯದಿಂದ ದೂರವೇ ಇದ್ದು, ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿರುವ ಒಂದು ಸಂಸ್ಥೆ. ಕನ್ನಡಿಗರ ಅಸ್ಮಿತೆಯಾಗಿರುವ ಈ ಪರಿಷತ್ನ್ನು ಘನತೆಯಿಂದ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಿದೆ. ಸಾಹಿತ್ಯದ ಬಗ್ಗೆ, ನಾಡು ನುಡಿಯ ಬಗ್ಗೆ ಅನುಭವ ಇರುವಂತಹವರು ಈ ಪರಿಷತ್ತಿನ ಅಧ್ಯಕ್ಷರಾಗಬೇಕೆಂಬುದು ನಮ್ಮ ಬಯಕೆಯಾಗಿದ್ದು, ಎಲ್ಲ ರೀತಿಯಿಂದಲೂ ಅರ್ಹತೆ ಪಡೆದಿರುವ ಬಿ.ಸಿ.ಶೈಲಾ ನಾಗರಾಜ್ ಅವರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡುವ ಅವಶ್ಯಕತೆ ಇದೆ ಎಂದರು.
ಶೈಲಾ ನಾಗರಾಜ್ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ಸಾಹಿತಿ ಮತ್ತು ಸಂಘಟಕರಾಗಿ ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದಾರೆ. ನಿರಂತರವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕøತರು. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ಸಾಂಸ್ಕøತಿಕ ದೇಸಿ ಉತ್ಸವ, ಶೈನಾ ಬರಹದ ಪತ್ರಿಕೆ ಮೂಲಕ ಗಮನ ಸೆಳೆದಿದ್ದಾರೆ. ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಕ್ರಿಯಾಶೀಲವಾಗಿರಬೇಕು. ಸಾಹಿತ್ಯ ಪರಿಷತ್ತು ಒಂದು ಘನತೆಯ ಸಂಸ್ಥೆಯಾಗಿಯೇ ಉಳಿಯಬೇಕು. ಇಲ್ಲಿ ಇತರೆ ರಾಜಕೀಯದ ಚುನಾವಣೆಗಳಂತೆ ಆಗಬಾರದು. ಸಾಹಿತಿಗಳಿಗೆ ಮತ್ತು ನಾಡು ನುಡಿಯ ಬಗ್ಗೆ ಆಸಕ್ತಿ ಇರುವವರಿಗೆ ಗೌರವ ಸಿಗಬೇಕು. ಆ ಕಾರಣಕ್ಕಾಗಿ ನಾವು ಶೈಲಾ ನಾಗರಾಜ್ ಅವರನ್ನು ಬೆಂಬಲಿಸುತ್ತಿದ್ದು, ಪರಿಷತ್ತಿನ ಮತದಾರ ಬಂಧುಗಳು ನ.21 ರಂದು ನಡೆಯಲಿರುವ ಕಸಾಪ ಚುನಾವಣೆಯಲ್ಲಿ ಉತ್ತಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದರು.
ಬಾ.ಹ.ರಮಾಕುಮಾರಿಯವರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಷ್ಟೆಲ್ಲ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂಬುದು ಸಾಹಿತ್ಯ ವಲಯದಲ್ಲಿ ಇರುವವರಿಗೆ ಗೊತ್ತಿದೆ. ಶೈಲಾ ನಾಗರಾಜ್ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಪರಿಷತ್ತಿನ ಎಲ್ಲ ಕೆಲಸ ಕಾರ್ಯಗಳಿಗೆ ಹೆಗಲು ಕೊಟ್ಟು ನಿಂತಿದ್ದರು. ಪರಿಷತ್ತನ್ನು ಮುನ್ನಡೆಸುವ ಅನುಭವ ಮತ್ತು ಸಾಮಥ್ರ್ಯ ಅವರಲ್ಲಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ 13 ಸಾವಿರಕ್ಕೂ ಹೆಚ್ಚು ಸಾಹಿತ್ಯ ಪರಿಷತ್ ಮತದಾರರಿದ್ದಾರೆ. ಲೇಖಕಿಯರ ಸಂಘದಲ್ಲಿ 82 ಮಂದಿ ಸದಸ್ಯರಿದ್ದಾರೆ. ಲೇಖಕಿಯರ ಸಂಘಕ್ಕೆ ಸದಸ್ಯರಾಗಲು ಕೆಲವು ನಿಬಂಧನೆಗಳಿರುವುದರಿಂದ ಹೆಚ್ಚು ಸದಸ್ಯತ್ವ ಮಾಡಲು ಸಾಧ್ಯವಿಲ್ಲ. ಇದುವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 12 ಮಂದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಳಗೆ ಶಾಂತ ಸನ್ಮತಿಕುಮಾರ್ ಹಾಗೂ ನನ್ನನ್ನು ಒಳಗೊಂಡಂತೆ ಇಬ್ಬರು ಮಾತ್ರ ಮಹಿಳೆಯರು ಕಾರ್ಯನಿರ್ವಹಿಸಿದ್ದಾರೆ ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ.ಅರುಂಧತಿ, ಖಜಾಂಚಿ ಸಿ.ಎಲ್.ಸುನಂದಮ್ಮ, ಸಿ.ಎನ್.ಸುಗುಣಾದೇವಿ, ಮುಮ್ತಾಜ್, ಸಿ.ಎ.ಇಂದಿರಾ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
